More

    ರೈತರಿಗೆ ತಟ್ಟಿದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ

    ಶ್ರೀಕಾಂತ್ ಅಕ್ಕಿ ಬಳ್ಳಾರಿ

    ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ ಈಗ ರಾಜ್ಯದ ಭತ್ತ ಬೆಳೆಗಾರರಿಗೂ ತಟ್ಟಿದೆ! ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದಿಂದ ಕೊಲ್ಲಿ ರಾಷ್ಟ್ರಗಳಿಗೆ ಅಕ್ಕಿ ರಫ್ತು ಸ್ಥಗಿತವಾಗಿದ್ದು, ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿ, ತುಂಗಭದ್ರಾ ಜಲಾಶಯ ತುಂಬಿದ್ದರಿಂದ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಇರಾನ್-ಅಮೆರಿಕ ಬಿಕ್ಕಟ್ಟು ಆಘಾತ ನೀಡಿದೆ. ಜನವರಿ ಮೊದಲ ವಾರದಲ್ಲಿ ಇರಾನ್ ಸೇನೆಯ ಕಮಾಂಡರ್​ನನ್ನು ಅಮೆರಿಕ ಹತ್ಯೆ ಮಾಡಿದ್ದರಿಂದ ಎರಡೂ ದೇಶಗಳ ನಡುವೆ ಯುದ್ಧಾತಂಕ ತಲೆದೋರಿತ್ತು. ಇದಾದ ಬಳಿಕ ಅರಬ್ ದೇಶಗಳಿಗೆ ಭಾರತದಿಂದ ಅಕ್ಕಿ ರವಾನೆ ಸ್ಥಗಿತಗೊಂಡಿದೆ.

    ಪ್ರತಿ ವರ್ಷ ಜನವರಿಯಿಂದ ಜೂನ್​ವರೆಗೆ ಅರಬ್ ದೇಶಗಳಿಗೆ ಅಕ್ಕಿ ರವಾನಿಸಲಾಗುತ್ತದೆ. ಇಲ್ಲಿನ ಭತ್ತವನ್ನು ಖರೀದಿದಾರರು ಖರೀದಿಸಿದ ನಂತರ ಅಂತಾರಾಷ್ಟ್ರೀಯ ಒಪ್ಪಂದದಂತೆ ಗುಜರಾತ್​ನ ಮುಂದ್ರಾ ಬಂದರು ಮೂಲಕ ಇರಾನ್​ನ ಚಾಬಹಾರ್ ಬಂದರಿಗೆ ಕಳಿಸಲಾಗುತ್ತದೆ. ಇರಾನ್ ತಲುಪಿದ ನಂತರ ಇತರ ಅರಬ್ ದೇಶಗಳಿಗೆ ಅಕ್ಕಿ ರವಾನೆಯಾಗುತ್ತದೆ. ಆದರೆ, ಯುದ್ಧದ ಭೀತಿಯಿಂದ ಕಳೆದ 15 ದಿನದಿಂದ ರಫ್ತು ನಿಂತಿದೆ. 2019ರಲ್ಲಿ 32,800 ಕೋಟಿ ರೂ. ಮೌಲ್ಯದ ಬಾಸುಮತಿ ಅಕ್ಕಿಯನ್ನು ಅರಬ್ ದೇಶಗಳಿಗೆ ಭಾರತ ರಫ್ತು ಮಾಡಿತ್ತು.

    ಬೆಲೆಯಲ್ಲಿ ಭಾರಿ ಇಳಿಕೆ

    ಮಾರುಕಟ್ಟೆಯಲ್ಲಿ ಅಕ್ಕಿ ದರ ಕುಸಿತ ಕಂಡಿದೆ. ಬಾಸುಮತಿ ಪ್ರತಿ ಕೆಜಿಗೆ 60- 70 ರೂ.ವರೆಗೆ ಸದ್ಯ ಮಾರಾಟವಾಗುತ್ತಿದೆ. ಯುದ್ಧ ಭೀತಿಗೂ ಮೊದಲು 120 ರಿಂದ 140 ರೂ.ವರೆಗೆ ಮಾರಾಟವಾಗುತ್ತಿತ್ತು ಎನ್ನುತ್ತಾರೆ ವ್ಯಾಪಾರಿಗಳು. ಒಂದು ಕ್ವಿಂಟಲ್ ಭತ್ತ ಕಳೆದ ವರ್ಷ ಈ ದಿನದಲ್ಲಿ 3,600 ರಿಂದ 3,800 ರೂ.ವರೆಗೆ ಮಾರಾಟವಾಗುತ್ತಿತ್ತು. ಆದರೆ, ಸದ್ಯ ಮಾರುಕಟ್ಟೆಯಲ್ಲಿ 3,100 ರಿಂದ 3,200 ರೂ. ಇದೆ. ಮುಂಗಾರಿನಲ್ಲಿ ಬಳ್ಳಾರಿ ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್, ಸಿರಗುಪ್ಪ 24 ಸಾವಿರ ಹೆಕ್ಟೇರ್ ಮತ್ತು ಕಂಪ್ಲಿ ತಾಲೂಕಿನಲ್ಲಿ 13 ಸಾವಿರ ಹೆಕ್ಟೇರ್​ನಲ್ಲಿ ಭತ್ತ ಕಟಾವು ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ಬಳ್ಳಾರಿ, ಕಂಪ್ಲಿ ಮತ್ತು ಹೊಸಪೇಟೆ, ಕೊಪ್ಪಳ ಜಿಲ್ಲೆಯ ಗಂಗಾವತಿ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತದೆ.

    ಅರಬ್ ದೇಶಗಳಿಗೆ ಕಳೆದ 15 ದಿನಗಳಿಂದ ರಫ್ತು ನಿಂತಿರುವುದರಿಂದ ಅಕ್ಕಿ ದರದಲ್ಲಿ ವ್ಯತ್ಯಾಸವಾಗಿದೆ. ಇನ್ನೊಂದು 15 ದಿನದಲ್ಲಿ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿದ್ದು, ಅದಾದ ಬಳಿಕ ಅಕ್ಕಿ, ಭತ್ತದ ದರ ಹೆಚ್ಚಳವಾಗುವ ನಿರೀಕ್ಷೆಯಿದೆ.

    | ಶ್ರೀಧರ್ ಕೃಷಿ ಅಧಿಕಾರಿ ಕಂಪ್ಲಿ

    ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿದಿದೆ. ಕಳೆದ ವರ್ಷ ಈ ದಿನಕ್ಕೆ ಒಂದು ಕ್ವಿಂಟಲ್ ಭತ್ತಕ್ಕೆ 3,600ರೂ.ವರೆಗೆ ದರ ಇತ್ತು. ಆದರೆ, ಈ ವರ್ಷ 3,100ರೂ.ವರೆಗೆ ಮಾರಾಟ ನಡೆಯುತ್ತಿದೆ.

    | ರಮೇಶ ಕೊಟ್ಟೂರು ರೈತ, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts