ಮಂಡ್ಯ: ಮಂಡ್ಯ ನಗರದ ಹೊರವಲಯದಲ್ಲಿ ಡಿ.20, 21 ಮತ್ತು 22ರಂದು ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿರುವ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಮತ್ತು ವೈದ್ಯಕೀಯ ನೆರವು ಸಮಿತಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ದಿನದ 24 ಗಂಟೆ ಕಾರ್ಯ ನಿರ್ವಹಿಸಲು ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ತಂಡ ರಚನೆ ಮಾಡಲಾಗಿದೆ. ಹೆಲ್ತ್ ಡೆಸ್ಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಸದರಿ ತಾತ್ಕಾಲಿಕ ಆಸ್ಪತ್ರೆಯಲ್ಲಿ 10 ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು ಫಾರ್ಮಸಿ ಮತ್ತು ಲ್ಯಾಬ್ ಘಟಕ ಕೂಡ ಇಲ್ಲಿ ಕಾರ್ಯನಿರ್ವಹಿಸಲಿದೆ.
ಇಸಿಜಿ ಮಿಷಿನ್, ಆಕ್ಸಿಜನ್ ಕನ್ಸನ್ ಟ್ರೇಟರ್ ಒಳಗೊಂಡಂತೆ ತೀವ್ರ ನಿಗಾ ಘಟಕಕ್ಕೆ ಅವಶ್ಯವಿರುವ ಕನಿಷ್ಠ ಉಪಕರಣಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ತುತ್ತು ಸೇವೆಗಾಗಿ ಆಂಬ್ಯುಲೆನ್ಸ್ ಸಿದ್ಧಗೊಳಿಸಲಾಗಿದೆ.
ತಜ್ಞರ ತಪಾಸಣೆಗಾಗಿ ತಾತ್ಕಾಲಿಕ ಆಸ್ಪತ್ರೆ ಒಳಗಡೆ 2 ಟೇಬಲ್ ಮತ್ತು ಚೇರ್ ವ್ಯವಸ್ಥೆ ಮಾಡಲಾಗುವುದು. ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಒಳಗೊಂಡ ಒಪಿಡಿ ಸ್ಲಿಪ್ ವಿತರಣೆಗೆ ಒಪಿಡಿ ರಿಜಿಸ್ಟ್ರೇಷನ್ ಕೌಂಟರ್ ವ್ಯವಸ್ಥೆ ಮಾಡಲಾಗುವುದು. ಫಾರ್ಮಸಿ ಘಟಕದಲ್ಲಿ ಅತ್ಯವಶ್ಯಕ ಔಷಧ ವಿತರಣೆ ಮತ್ತು ಲ್ಯಾಬ್ ಘಟಕದಲ್ಲಿ ತುರ್ತು ಚಿಕಿತ್ಸಾ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಾಲ್ಕು ವೀಲ್ ಚೇರ್ ಹಾಗೂ 5 ಸ್ಟ್ರೇಚರ್ ಗಳ ವ್ಯವಸ್ಥೆ ಕೂಡ ಇರಲಿದೆ.
ಇದಲ್ಲದೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪಾಳಿಯಲ್ಲಿ ಪ್ರತ್ಯೇಕ ತಂಡಗಳಲ್ಲಿ ವೈದ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ 20 ಬೆಡ್ ಗಳ ಸುಸಜ್ಜಿತ ವಾರ್ಡ್ ಅನ್ನು ಮೀಸಲಿರಿಸಲಾಗಿದೆ. ಪ್ರಧಾನ ವೇದಿಕೆ, ಸಮಾನಂತರ ವೇದಿಕೆ ಹಾಗೂ ವಸ್ತು ಪ್ರದರ್ಶನ ಮಳಿಗೆ, ಆಹಾರ ಕೌಂಟರ್ ಸೇರಿದಂತೆ ಹಲವೆಡೆ ವೈದ್ಯ ಸಿಬ್ಬಂದಿಗಳನ್ನು ನಿಯೋಜಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಒಟ್ಟಾರೆ ಸಾಹಿತ್ಯ ಸಮ್ಮೇಳನದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಸಮ್ಮೇಳನದಲ್ಲಿ ದಿನದ 24 ಗಂಟೆ ಆರೋಗ್ಯ ಸೇವೆ ಕಲ್ಪಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ವಾರ್ಡ್ ಮೀಸಲಿರಿಸಲಾಗಿದೆ. ಪಾಳಿಯಲ್ಲಿ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ. ಮಹಿಳೆಯರು ಮತ್ತು ಮಕ್ಕಳ ಕ್ಲಿನಿಕ್, ಸ್ಟೇಜ್ ಪಕ್ಕದಲ್ಲೇ ತಾತ್ಕಾಲಿಕ ಕ್ಲಿನಿಕ್ ಗಳನ್ನು ತೆರೆಯಲಾಗುವುದು. ನರ್ಸಿಂಗ್, ಫಾರ್ಮಸಿ ಸೇರಿದಂತೆ ಮೇಲುಸ್ತುವಾರಿಗಾಗಿ ಸಮಿತಿಗಳನ್ನು ಕೂಡ ರಚಿಸಲಾಗಿದೆ.ಡಾ.ಕೆ.ಮೋಹನ್ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ