ಶ್ರವಣಬೆಳಗೊಳ: ಶ್ರೀ ಕ್ಷೇತ್ರದ ಬಂಡಾರಿ ಬಸದಿಯಲ್ಲಿ 12 ಅಡಿ ಎತ್ತರದ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯನ್ನು ಭಾನುವಾರ ಪ್ರತಿಷ್ಠಾಪಿಸಿ ಮಸ್ತಕಾಭಿಷೇಕ ನೆರವೇರಿಸಲಾಯಿತು.

ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿರುವ ವಿಶ್ವವಿಖ್ಯಾತ 58 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ನೋಡಲು ನಿತ್ಯ ಸಾವಿರಾರು ಭಕ್ತ್ತರು ಆಗಮಿಸುತ್ತಿದ್ದರು. ಆ ಪೈಕಿ ವೃದ್ಧರು, ಅಂಗವಿಕಲರು ಸೇರಿದಂತೆ ಅಶಕ್ತರು ವಿಂಧ್ಯಗಿರಿ ಬೆಟ್ಟ ಹತ್ತಿ ಬಾಹುಬಲಿಯ ದರ್ಶನ ಮಾಡಲು ಸಾಧ್ಯವಾಗುತ್ತಿರಲಿಲ್ಲ ಈ ಹಿನ್ನೆಲೆಯಲ್ಲಿ ಈ ಹಿಂದಿನ ಪೀಠಾಧ್ಯಕ್ಷರಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 8 ವರ್ಷಗಳ ಹಿಂದೆ 12 ಅಡಿ ಮೂರ್ತಿಯನ್ನು ಕೆತ್ತಿಸಿದ್ದರು. ಆದರೆ ಪ್ರತಿಷ್ಠಾಪನೆ ಮಾಡಲು ಸಾಧ್ಯವಾಗಿರಲಿಲ್ಲ.
ಇದೀಗ ಶ್ರೀ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಚಾರ್ಯ ಶ್ರೀ ಕುಂತುಸಾಗರ ಮಹಾರಾಜರು, ಸಂಘಸ್ಥ ಯಾಗಿಗಳು ಸಮಸ್ತ ಭಟ್ಟಾರಕ ಸ್ವಾಮೀಜಿ ಅವರ ಪಾವನ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪಿಸಿ ಪಂಚಕಲ್ಯಾಣ ಹಾಗೂ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಮಸ್ತಕಾಭಿಷೇಕ ಕಾರ್ಯಕ್ರಮ ಆರಂಭವಾಯಿತು. ವಿವಿಧ ಜಲ, ಗಂಧ, ದ್ರವ್ಯ, ಪುಷ್ಪಗಳಿಂದ ಅಭಿಷೇಕ ಮಾಡಲಾಯಿತು. ಮೊದಲಿಗೆ ಗುಳ್ಳಕಾಯಿ ಅಜ್ಜಿ ಕಳಶ, ಚಾವುಂಡರಾಯ ಕಳಶ, ಜಲಾಭಿಷೇಕ, ಎಳನೀರು, ತೆಂಗಿನಕಾಯಿ ತುರಿ, ದಾಳಿಂಬೆರಸ, ಮೋಸಂಬಿರಸ, ಕಿತ್ತಳೆರಸ, ಮಾವಿನರಸ, ಕಬ್ಬಿನರಸ, ಫಲಾಭಿಷೇಕ, ಕಡಲೆಬೇಳೆ, ಹೆಸರುಬೇಳೆ, ಸಕ್ಕರೆ, ಬೆಲ್ಲ, ತುಪ್ಪ, ಹಾಲು, ಮೊಸರು, ಅಕ್ಕಿ ಹಿಟ್ಟು, ಅರಿಶಿನ ಹಿಟ್ಟು, ಅರಿಶಿನ, ಸರ್ವಔಷಧಿ, ಕಷಾಯ, ಚತುಷ್ಕೋನ ಕಳಶ, ರಕ್ತಚಂದನ, ಅಷ್ಟಗಂಧ, ಕೇಸರಿ, ಮಲಯಗಿರಿ ಚಂದನ, ನವರತ್ನ, ಬೆಳ್ಳಿ ಹೂವು, ಬಂಗಾರದ ಹೂವು, ಲವಂಗ, ಮಂಗಳೂರು ಮಲ್ಲಿಗೆ, ಮೈಸೂರು ಮಲ್ಲಿಗೆ, ಸಂಪಿಗೆ, ಮರ್ಲೆ, ಏಳು ಬಗೆಯ ಸೇವಂತಿಗೆ, ಆರು ಬಗೆಯ ಗುಲಾಬಿ, ಕೆಂಪುಕಮಲ, ಬಿಳಿತಾವರೆ, ಪಾರಿಜಾತ, ಕನಕಾಂಬರ, ಕರವೀರ, ಬಿಳಿ ಕಣಗಲೆ, ಅಶೋಕ ಪುಷ್ಪ, ಪಂಚರಂಗಿ ಹಾರ, ಅಷ್ಟವಿಧಾರ್ಚನೆ, ಆರತಿ, ಪಂಚಾರತಿ, ಕರ್ಪೂರದಾರತಿ, ಬೆಳ್ಳಿ ಆರತಿ, ಮುತ್ತುರತ್ನ ಆರತಿ, 108 ಕಳಶ ಹಾಗೂ ಮಹಾ ಶಾಂತಿದಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.