ಹಾವೇರಿ: ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧಾರ್ಮಿಕ ಸಂಸ್ಕಾರಗಳು ಮುಖ್ಯ. ಅರಿವುಳ್ಳ ಮಾನವ ಜೀವನದಲ್ಲಿ ಒಂದಿಷ್ಟಾದರೂ ಆಧ್ಯಾತ್ಮಿಕ ಚಿಂತನೆಗಳ ಅವಶ್ಯಕತೆಯಿದೆ. ಸದೃಢ ಸಮಾಜ ನಿರ್ಮಾಣಕ್ಕೆ ವೀರಶೈವ ಪೀಠ ಮಠಗಳ ಕೊಡುಗೆ ಅಪಾರವಾದುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಜಗದ್ಗುರು ಶ್ರೀ ರೇಣುಕಾಚಾರ್ಯ ಮಂದಿರದಲ್ಲಿ ಶುಕ್ರವಾರ ಲಿಂ.ಶ್ರೀ ರಂಭಾಪುರಿ ವೀರರುದ್ರಮುನೀಶ್ವರ ಜಗದ್ಗುರುಗಳ ಜನ್ಮ ಶತಮಾನೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಗೆ ಬೆಳ್ಳಿ ಕವಚ ಸಮರ್ಪಣೆ ಹಾಗೂ ನಡುವಿನಮಠದ ಪುನರುತ್ಥಾನದ ಅಂಗವಾಗಿ ಆಯೋಜಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದುದು. ಇದರ ಪರಂಪರೆ ಮತ್ತು ಬೆಳೆದು ಬಂದ ಸಂಸ್ಕೃತಿ ಮಾನವ ಜನ ಸಮುದಾಯದ ಮೇಲೆ ಆಗಾಧ ಪರಿಣಾಮ ಬೀರಿವೆ. ಕರ್ಮ ಕಳೆದು ಧರ್ಮ ಬಿತ್ತಿ ಬದುಕು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ನಡುವಿನ ಮಠದ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಬೆಳ್ಳಿ ಕವಚ ಅರ್ಪಿಸುತ್ತಿರುವುದು ತಮ್ಮೆಲ್ಲರ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ. ಹಾವೇರಿ ನಗರದ ನಡುವಿನ ಮಠದಲ್ಲಿ ಲಿಂ.ಶ್ರೀ ವೀರರುದ್ರಮುನಿ ಜಗದ್ಗುರುಗಳು ಒಂದು ತಿಂಗಳ ಕಾಲ ಶ್ರಾವಣ ತಪೋನುಷ್ಠಾನ ನೆರವೇರಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಸಂಸ್ಥಾಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಪರಮ ಪೂಜ್ಯರ ಜನ್ಮ ಶತಮಾನೋತ್ಸವ ಇದೇ ಸಂದರ್ಭದಲ್ಲಿ ಸಂಯೋಜಿಸಿರುವುದು ತಮ್ಮೆಲ್ಲರ ಗುರು ಪೀಠದ ಅಭಿಮಾನಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ. ಲಿಂ.ಶ್ರೀ ಜಗದ್ಗುರು ವೀರರುದ್ರಮುನಿ ಶಿವಾಚಾರ್ಯರು 19 ವರ್ಷಗಳ ಕಾಲ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳಾಗಿ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳ ಮೂಲಕ ಜನಮನವನ್ನು ತಲುಪಿದ ಮಹಾಚೇತನರು. ಅಂಥವರ ಜನ್ಮ ಶತಮಾನೋತ್ಸವ ಆಚರಣೆ ಸಮಾಜ ಬಾಂಧವರ ಸಂತೋಷಕ್ಕೆ ಕಾರಣವಾಗಿದೆ. ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ನಡುವಿನಮಠದ ಬಂಧುಗಳು ಜೀರ್ಣೋದ್ಧಾರಕ್ಕೆ ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಎಸ್.ಬಿ ಹಿರೇಮಠರು ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ್ದನ್ನು ಸ್ಮರಿಸಿದರು.
ಹಾವೇರಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯರು, ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು. ದಾನಿಗಳಾದ ಈಶ್ವರಯ್ಯ ನಡುವಿನಮಠ ಮತ್ತು ಶಿವಯ್ಯ ನಡುವಿನಮಠ ಸಹೋದರರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ಸಮಾರಂಭದಲ್ಲಿ ಕೂಡಲ, ಹೇರೂರ, ಬಂಕಾಪುರ, ರಟ್ಟಿಹಳ್ಳಿ ಶ್ರೀಗಳು, ಜಿಲ್ಲೆಯ ವಿವಿಧ ಮಠಾಧೀಶರು, ಗಣ್ಯರು ಮತ್ತು ದಾನಿಗಳು ಪಾಲ್ಗೊಂಡಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಸೇವಾ ಸಮಿತಿ ಅಧ್ಯಕ್ಷ ಕುಮಾರ ಸಾತೇನಹಳ್ಳಿ, ಎಸ್.ಬಿ ಹಿರೇಮಠ, ಮಲ್ಲಿಕಾರ್ಜುನ ಸಾತೇನಹಳ್ಳಿ, ಸಿದ್ದಲಿಂಗಯ್ಯ ಶಾಸ್ತ್ರೀ, ಮತ್ತಿತರರು ಪಾಲ್ಗೊಂಡಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.