ಹಾವೇರಿ: ರಾಜ್ಯ ಸರ್ಕಾರ ಹಾಲಿನ ದರ 4 ರೂ. ಹೆಚ್ಚಿಸಿ ಸಂಪೂರ್ಣ 4 ರೂ. ಹಾಲು ಉತ್ಪಾದಕರಿಗೆ ಕೊಡಬೇಕು ಎಂದು ಆದೇಶಿಸಿದ್ದರೂ, ನಷ್ಟದ ನೆಪದಲ್ಲಿ ಮೊಂಡಾಟ ಪ್ರದರ್ಶಿಸುವ ಮೂಲಕ ಎಂಟಾಣೆ ಮಾತ್ರ ಹೆಚ್ಚಳ ಮಾಡಿದ್ದ ಹಾವೇರಿ ಹಾಲು ಒಕ್ಕೂಟ (ಹಾವೆಮುಲ್) ಕೊನೆಗೂ 4 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
4 ರೂ. ಹೆಚ್ಚಳ ಮಾಡುವ ವಿಷಯ ಗೊತ್ತಾಗುತ್ತಿದ್ದಂತೆ ಒಕ್ಕೂಟ, ಹಾಲು ಉತ್ಪಾದಕರಿಗೆ ಕೊಡವ ದರದಲ್ಲಿ 3.50 ರೂ. ಕಡಿತಗೊಳಿಸಿ, ನಂತರ ಕೇವಲ 50 ಪೈಸೆ ಹೆಚ್ಚಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕುರಿತು ‘ವಿಜಯವಾಣಿ’ ಏ.2ರಂದು ‘ಹಾಲು ಉತ್ಪಾದಕರಿಗೆ ಕೇವಲ ಎಂಟಾಣೆ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಒಕ್ಕೂಟ 2.50 ರೂ. ಹೆಚ್ಚಿಸಿತ್ತು. ಸಂಪೂರ್ಣವಾಗಿ 4 ರೂ. ಹೆಚ್ಚಿಸುವಂತೆ ರೈತ ಸಂಘ ಪ್ರತಿಭಟನೆ ನಡೆಸಿತ್ತು.
ಈ ವಿಷಯ ಸಿಎಂ ವರೆಗೆ ತಲುಪಿತ್ತು. 4 ರೂ. ಸಂಪೂರ್ಣವಾಗಿ ರೈತರಿಗೆ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಕ್ಕೂಟ ಏ.9ರಂದು ಮತ್ತೆ 2.50 ರೂ.ನಿಂದ ಸಂಪೂರ್ಣವಾಗಿ 4 ರೂ. ದರ ಹೆಚ್ಚಿಸಿ ಆದೇಶಿಸಿದೆ. ಈ ಮೂಲಕ ಸದ್ಯ ಆಕಳ ಹಾಲಿಗೆ 35.55 ರೂ. ಹಾಗೂ ಎಮ್ಮೆ ಹಾಲಿಗೆ 48.05 ರೂ. ದರ ರೈತರಿಗೆ ಸಿಗಲಿದೆ.
ರೈತ ಸಂಘದ ಹೋರಾಟ ಹಾಗೂ ಮಾಧ್ಯಮಗಳ ಒತ್ತಡಕ್ಕೆ ಮಣಿದು ಒಕ್ಕೂಟ 4 ರೂ. ಹೆಚ್ಚಿಸಿದೆ. ಇದನ್ನು ರೈತ ಸಂಘ ಸ್ವಾಗತಿಸುತ್ತದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದ್ದಾರೆ.

ಶೀಘ್ರವೇ ಸಚಿವರೊಂದಿಗೆ ಸಭೆ
ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಹಾಗೂ ರೈತರ ಹಿತದ ದೃಷ್ಟಿಯಿಂದ ರೈತರಿಗೆ ನೀಡುವ ಹಾಲಿನ ದರ 4 ರೂ. ಹೆಚ್ಚಳ ಮಾಡಲಾಗಿದೆ. ಒಕ್ಕೂಟದ ಸಮಸ್ಯೆಗಳ ಪರಿಹಾರದಕ ಕುರಿತು ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರೊಂದಿಗೆ ಒಕ್ಕೂಟದ ಸಭೆ ನಡೆಯಲಿದೆ. ನಷ್ಟ ಸರಿಪಡಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ ‘ವಿಜಯವಾಣಿ’ಗೆ ತಿಳಿಸಿದ್ದಾರೆ.