ಹಾಸನ: ಶಿಕ್ಷಕರು ಹಾಗೂ ಪಾಲಕರ ನಿರ್ಲಕ್ಷೃದಿಂದಲೇ ಮಕ್ಕಳು ಅಡ್ಡದಾರಿ ಹಿಡಿಯುತ್ತಿದ್ದು, ಅವರಿಗೆ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವ ಕೆಲಸ ಆಗಬೇಕು ಎಂದು ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ. ಜಯಶ್ರೀ ಕಿವಿಮಾತು ಹೇಳಿದರು.
ನಗರದ ಅಮ್ಮನ ಮಡಿಲು ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿ ಮಕ್ಕಳ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಭಾರತೀಯ ಕಲೆ, ಸಂಸ್ಕೃತಿ, ಅಧ್ಯಾತ್ಮವನ್ನು ಅಳವಡಿಸಿಕೊಂಡ ವ್ಯಕ್ತಿ ಯಾವತ್ತಿಗೂ ತಪ್ಪು ದಾರಿ ಹಿಡಿಯುವುದಿಲ್ಲ ಎಂದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಜೆ. ಜೈಕಿರಣ ಮಾತನಾಡಿ, ಒತ್ತಡದ ಜೀವನಕ್ಕೆ ಸಿಲುಕಿರುವ ನಾವು ಆರೋಗ್ಯದ ಕುರಿತು ನಿರ್ಲಕ್ಷೃ ತಾಳಿದ್ದೇವೆ ಎಂದು ಹೇಳಿದರು.
ಗಮನ ಸೆಳೆದ ಮಕ್ಕಳು: ಶಾಲೆಯ ಮಕ್ಕಳು ಬಗೆ ಬಗೆಯ ಬಟ್ಟೆ ಧರಿಸಿ ಗಮನ ಸೆಳೆದರು. ಪಾಲಕರು ಹಾಗೂ ಶಿಕ್ಷಕರಿಗೆ ಎಳ್ಳು-ಬೆಲ್ಲ ವಿತರಿಸಿ ಸಂಭ್ರಮಿಸಿದರು. ಹಸು, ಭತ್ತದ ರಾಶಿ ಮಾದರಿ ರಚಿಸಿ ಹಳ್ಳಿಯ ಸೊಗಡನ್ನು ಪರಿಚಯಿಸಲಾಯಿತು.
ನಗರಸಭೆ ಸದಸ್ಯ ರಕ್ಷಿತ್, ವಿದ್ಯಾಸೌಧ ಶಿಕ್ಷಣ ಸಂಸ್ಥೆ ಪ್ರಾಂಶುಪಾಲೆ ಮಮತಾ, ಅಮ್ಮನ ಮಡಿಲು ಸಂಸ್ಥೆ ಕಾರ್ಯದರ್ಶಿ ಹರೀಶ್, ಪ್ರಾಂಶುಪಾಲೆ ಭವ್ಯಾ, ಆಡಳಿತಾಧಿಕಾರಿ ಗಾಯತ್ರಿ ಇತರರಿದ್ದರು.
