ಹಾಸನ: ಜಿಲ್ಲೆಯ ಅರಕಲಗೂಡು, ಬೇಲೂರು, ಸಕಲೇಶಪುರ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ರೈತರು ಅಕ್ಷರಶ: ನಲುಗಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ, ಕಾಫಿ, ಭತ್ತ, ರಾಗಿ ನೀರಲ್ಲಿ ಮುಳುಗಿದ್ದು ಬದುಕು ಮೂರಾಬಟ್ಟೆಯಾಗಿದೆ. ಬುಧವಾರ ಸಂಜೆ ವೇಳೆ ಮಿಂಚು ಗುಡುಗು ಸಹಿತ ಶುರುವಾರ ಮಳೆ ರಾತ್ರಿಯಿಡಿ ಬಿಡುವಿಲ್ಲದೆ ಧಾಕಾರವಾಗಿ ಸುರಿದು ಅಬ್ಬರಿಸಿದ್ದು ಕಟಾವು ನಡೆಸಿದ ಭತ್ತ ಹುಲ್ಲು ನೀರಿನಲ್ಲಿ ಮುಳುಗಿ ಕರಗುತ್ತಿದೆ.
ಹೇಮಾವತಿ, ಕಾವೇರಿ ನದಿ ನಾಲಾ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಭತ್ತದ ಬೆಳೆ ಬೆಳೆದ್ದಿದ್ದು ಕೆಲವೆಡೆ ಕಟಾವು ಕಾರ್ಯ ಮುಗಿಸಿ ಬಣವೆ ಹಾಕಿದ್ದಾರೆ. ಇನ್ನು ಹಲವೆಡೆ ಬೆಳೆದು ನಿಂತಿದ್ದ ರಾಜಮುಡಿ ಭತ್ತ ಮಳೆಗೆ ಬಲಿಯಾಗಿದೆ. ಕಟಾವು ಮಾಡಿ ಗದ್ದೆಗಳಲ್ಲಿ ಅರಿ ಹಾಕಿದ್ದ ಭತ್ತದ ಹುಲ್ಲು ಫಸಲು ಸಹಿತ ಜಲಾವೃತವಾಗಿದೆ.
ಬುಧವಾರ ರಾತ್ರಿ 7 ರಿಂದ ಬೇಲೂರು ತಾಲೂಕಿನಲ್ಲಿ ಸುರಿದ ಬಾರಿ ಮಳೆಗೆ ಗಿಡದಲ್ಲಿದ್ದ ಹಾಗೂ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಕೊಚ್ಚಿ ಹೋಗಿದೆ.
ಕಾಡಾನೆಗಳ ಹಾವಳಿಯ ನಡುವೆಯೂ ಜೀವ ಭಯದಲ್ಲೆ ಕಾಫಿ ತೋಟಗಳ ಮಾಲೀಕರು ಕಾರ್ಮಿಕರನ್ನು ಕರೆತಂದು ಅಲ್ಪ ಸ್ವಲ್ಪ ಕಾಫಿ ಕೊಯ್ಲು ಮಾಡಿಸಿ ಕಣದಲ್ಲಿ ಒಣ ಹಾಕಿದ್ದರು. ಸಂಕಷ್ಟದಲ್ಲಿದ್ದ ಬೆಳೆಗಾರರನ್ನು ಮಳೆ ನಷ್ಟದ ದವಡೆಗೆ ನೂಕಿದೆ.