ಚನ್ನರಾಯಪಟ್ಟಣ: ಸಮಾಜ ಸೇವೆ ಎಂದಿಗೂ ನಿಂತ ನೀರಾಗಬಾರದು ಎಂದು ಬೆಂಗಳೂರಿನ ಅಂಗ ಕಾರುಣ್ಯ ಸಂಸ್ಥೆಯ ಮುಖ್ಯಸ್ಥೆ ಲಲಿತಾ ಶೇಷಾದ್ರಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬೆಂಗಳೂರು ಮತ್ತು ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 2 ನೇ ಹಂತದ ಕೃತಕ ಕಾಲು ಉಚಿತ ಜೋಡಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ದೇವರು ಯಾರಿಗೂ ಅಂಗವಿಕಲತೆ ನೀಡಬಾರದು. 2 ವರ್ಷಗಳಲ್ಲಿ 2000 ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಮತ್ತು ಕೈಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಚನ್ನರಾಯಪಟ್ಟಣದಲ್ಲಿ ಮೊದಲನೇ ಹಂತವಾಗಿ ಡಿ.17ರಂದು ನಡೆದ ಶಿಬಿರದಲ್ಲಿ 17 ಫಲಾನುಭವಿಗಳಿಗೆ ಕೃತಕ ಕಾಲು ಹಾಗೂ ಕೈಗಳನ್ನು ಜೋಡಿಸಲಾಗಿತ್ತು ಎಂದರು.
ಗ್ರಾಮೀಣ ಪ್ರದೇಶದ ಅಂಗವಿಕಲರಿಗೆ ಅರಿವು ಮೂಡಿಸಿ ಕರೆತಂದಲ್ಲಿ ಮುಂದೆ ನಡೆಯುವ ಶಿಬಿರದಲ್ಲಿ ಅವರಿಗೆ ಕೃತಕ ಕಾಲು ಹಾಗೂ ಕೈಗಳನ್ನು ಉಚಿತವಾಗಿ ಜೋಡಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಿ.ಮಹೇಶ್ ಮಾತನಾಡಿ, ಅಂಗವಿಕಲರಿಗೆ ಸೌಕರ್ಯ ಒದಗಿಸುವ ಸೇವೆ ನಮ್ಮದಾಗಿದ್ದು, ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ ಎಂದು ತಿಳಿಸಿದರು.
ಬಳಿಕ 30 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೃತಕ ಕಾಲು ಹಾಗೂ ಕೈಗಳನ್ನು ಜೋಡಣೆ ಮಾಡಲಾಯಿತು, ಬೆಂಗಳೂರಿನ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಚಂದ್ರಕಲಾ, ಪದಾಧಿಕಾರಿಗಳಾದ ಅಚಿತ್ಬಾಬು, ದೀಪ್ತಿ, ಪ್ರಸನ್ನ, ವಿಜಯ್, ಸುಧಾಮತಿ, ಸೈಮನ್ ಮನೋಜ್ಕುಮಾರ್, ಅಂಗ ಕಾರುಣ್ಯ ಸಂಸ್ಥೆಯ ಜಯರಾಂ ತಂಬಯ್ಯ, ಪ್ರಾಂತೀಯ ಅಧ್ಯಕ್ಷ ಅನಿಲ್ಕುಮಾರ್, ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ರವಿ, ಖಜಾಂಚಿ ನಾಗರಾಜ್ ಇತರರು ಇದ್ದರು.
