ಬಿಸಿಎಂ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಯೋಜನೆ
ಹರಪನಹಳ್ಳಿ: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 24 ಸಾವಿರ ಹಾಸ್ಟೆಲ್ಗಳಿದ್ದು, ಇನ್ನೂ 1.20 ಲಕ್ಷ ಮಕ್ಕಳು ಹೊರಗಡೆ ಇದ್ದಾರೆ. ಸ್ಥಳದ ಲಭ್ಯತೆಗನುಗುಣವಾಗಿ 21 ಸಾವಿರ ಮಕ್ಕಳಿಗೆ ವಸತಿ ಸೌಲಭ್ಯ ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಜುಕೇಷನ್ ಹಬ್ನಂತಿರುವ ಮಂಗಳೂರು, ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ದೀನದಯಾಳು ಹೆಸರಿನಲ್ಲಿ ಒಂದು ಸಾವಿರ ಮಕ್ಕಳಿಗೆ ಅವಕಾಶ ಇರುವ ನಿಲಯಗಳನ್ನು ಮಂಜೂರು ಮಾಡಲಾಗುವುದು. 50 ಕನಕದಾಸರ ಹಾಸ್ಟೆಲ್, 100 ಬಾಬಾ ಸಾಹೇಬ್ ಅಂಬೇಡ್ಕರ ಹಾಸ್ಟೆಲ್ಗಳನ್ನು ಮಂಜೂರು ಮಾಡಲಾಗಿದೆ. ಬಿಸಿಎಂ ಹಾಸ್ಟೆಲ್ನಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಯೋಜನೆಯಿದೆ. ಹಂತಹಂತವಾಗಿ ಹೊರಗುಳಿದ ವಿದ್ಯಾರ್ಥಿಗಳನ್ನು ಬಿಸಿಎಂ ಹಾಸ್ಟೆಲ್ ಒಳಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ನೇರವಾಗಿ ರೈತರ ಖಾತೆಗೆ ಜಮಾ
ಗಂಗಾ ಕಲ್ಯಾಣ ಯೋಜನೆಯಲ್ಲಿ 2015ರಿಂದ 2017ರ ವರೆಗೆ 14 ಸಾವಿರ ಕೊಳವೆ ಬಾವಿಗಳನ್ನು ಕೊರೆಯಿಸಬೇಕಾಗಿತ್ತು, ಈ ಬಗ್ಗೆ ತನಿಖೆ ವರದಿ ಬಂದಾಗ ಐದು ಸಾವಿರ ಕೊಳವೆ ಕೊರೆಸಲಾಗಿದೆ. ಒಂದು ಸಾವಿರ ಕೊಳವೆ ಬಾವಿಗಳ ಟೆಂಡರ್ನಲ್ಲಿ ಮಾತ್ರ ಲೋಪವಾಗಿತ್ತು. ಬೋರ್ಗಳನ್ನು ಕೊರೆಯಿಸುವ ಪ್ರಕ್ರಿಯೆ ನಡೆದಿದೆ. ಒಂದೊಂದು ವಿಧಾನಸಭಾ ಕ್ಷೇತ್ರದಿಂದ 60 ಫಲಾನುಭವಿಗಳಿಗೆ ಆಯ್ಕೆಗೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಅವಕಾಶವಿದೆ. ಗಂಗಾಕಲ್ಯಾಣ ಯೋಜನೆಗೆ ಆಯ್ಕೆಯಾದವರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು. ಮಾನ್ಯತೆ ಪಡೆದ ಏಜೆನ್ಸಿಯಿಂದ ಕೊಳವೆಬಾವಿ ಕೊರೆಯಿಸಿಕೊಳ್ಳಬಹುದಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.