ನವದೆಹಲಿ: ಭಾರತೀಯ ಕ್ರಿಕೆಟ್ ತಂಡದಲ್ಲಿರುವ “ಸೂಪರ್ಸ್ಟಾರ್ ಸಂಸ್ಕೃತಿ’ಯನ್ನು ಟೀಕಿಸಿರುವ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಇದನ್ನು ಕೊನೆಗೊಳಿಸಿ, ನಿರ್ವಹಣೆಯ ಆಧಾರದಲ್ಲಿ ಆಟಗಾರರನ್ನು ತಂಡಕ್ಕೆ ಆರಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.
“ಭಾರತ ತಂಡದಲ್ಲಿ ಸೂಪರ್ಸ್ಟಾರ್ ಸಂಸ್ಕೃತಿ ಬೆಳೆದಿದೆ. ನಮಗೆ ಸೂಪರ್ಸ್ಟಾರ್ಗಳು ಅಗತ್ಯವಿಲ್ಲ. ಉತ್ತಮ ನಿರ್ವಹಣೆ ತೋರುವವರಷ್ಟೇ ಬೇಕು. ಸೂಪರ್ಸ್ಟಾರ್ ಸಂಸ್ಕೃತಿಯಿಂದ ತಂಡ ಬೆಳವಣಿಗೆ ಕಾಣುತ್ತಿಲ್ಲ. ಸೂಪರ್ಸ್ಟಾರ್ ಆಗಲು ಬಯಸುವವರು ಮನೆಯಲ್ಲಿರಬಹುದು ಮತ್ತು ಅಲ್ಲೇ ಕ್ರಿಕೆಟ್ ಆಡಬಹುದು’ ಎಂದು ಹರ್ಭಜನ್ ತನ್ನ ಯುಟ್ಯೂಬ್ ಚಾನಲ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಭಾರತ ತಂಡದಲ್ಲಿರದಿದ್ದರೆ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ 0-5ರಿಂದ ಸೋಲಬೇಕಾಗುತ್ತಿತ್ತು ಎಂದೂ ಅವರು ಹೇಳಿದ್ದಾರೆ.
“ಮುಂದಿನ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂಬುದಕ್ಕಿಂತ, ಉತ್ತಮ ನಿರ್ವಹಣೆ ತೋರುವವರನ್ನಷ್ಟೇ ಆರಿಸಬೇಕು. ಆಟಗಾರರನ್ನು ಅವರ ವರ್ಚಸ್ಸಿನ ಆಧಾರದಲ್ಲಿ ತಂಡಕ್ಕೆ ಆರಿಸಬಾರದು. ಅದೇ ಮುಖ್ಯವಾದರೆ ಕಪಿಲ್ ದೇವ್ ಸರ್ ಮತ್ತು ಅನಿಲ್ ಭಾಯ್ (ಕುಂಬ್ಳೆ) ಕೂಡ ತಂಡದಲ್ಲಿ ಸ್ಥಾನ ಪಡೆಯಲಿ’ ಎಂದಿದ್ದಾರೆ.
ಟ್ರೋಫಿ ವಿತರಣೆಗೆ ಆಹ್ವಾನಿಸದ ಬಗ್ಗೆ ಗಾವಸ್ಕರ್ ಬೇಸರ; ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ ಹೀಗಿದೆ…