ಹನುಮಸಾಗರ: ಜಗತ್ತಿಗೆ ನಮ್ಮನ್ನು ಪರಿಚಯಿಸಿದ ತಾಯಿಗೆ ಪ್ರತಿಯೊಬ್ಬರೂ ಸದಾ ಕಾಲ ಚಿರಋಣಿಯಾಗಿರಬೇಕು ಎಂದು ಗ್ರಾಪಂ ಕರವಸೂಲಿಗಾರ ಮಹಾಂತೇಶ ತಳವಾರ ಹೇಳಿದರು.

ಸಮೀಪದ ಮದ್ನಾಳ ಗ್ರಾಮದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಭಾನುವಾರ ಹಮ್ಮಿಕೊಂಡ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿದರು. ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಪ್ರೀತಿ ಎಂದರೆ ಅದು ತಾಯಿ ಪ್ರೀತಿ. ನಮ್ಮನ್ನು ಭೂಮಿಗೆ ತಂದ ತಂದೆ-ತಾಯಿಗಳನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ಪುರಾಣಗಳಲ್ಲಿ ತಾಯಿಯನ್ನು ಭೂಮಿಗೆ ಹೋಲಿಸುತ್ತಾರೆ. ಯಾಕೆಂದರೆ ಆಕೆ ಭೂಮಿಯಷ್ಟೇ ಸಹನೆ, ಪ್ರೀತಿ, ಕರುಣೆಯುಳ್ಳವಳು. ಯಾವ ತಾಯಿಯು ತನ್ನ ಮಗನಿಗೆ ಕೆಟ್ಟದನ್ನು ಬಯಸುವುದಿಲ್ಲ.
ಮಕ್ಕಳು ತಾಯಿಗೆ ಎಷ್ಟೇ ನೋವು ನೀಡಿದರೂ ಆಕೆ ಸಹಿಸಿಕೊಂಡು ಇರುತ್ತಾಳೆ. ತಾನು ಉಪವಾಸ ಇದ್ದು ಮಕ್ಕಳ ಹೊಟ್ಟೆ ತುಂಬಿಸುವ ತಾಯಿಯ ತ್ಯಾಗ ಸರ್ವಕಾಲಕ್ಕೂ ಶ್ರೇಷ್ಠವಾಗಿದೆ ಎಂದರು.