ಹಾನಗಲ್ಲ: ದುಪ್ಪಟ್ಟಾಗಿರುವ ಶಾಸಕರ ವೇತನವನ್ನು ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ವಿನಿಯೋಗಿಸುವುದಾಗಿ ಪ್ರಕಟಿಸಿದ್ದ ಶಾಸಕ ಶ್ರೀನಿವಾಸ ಮಾನೆ ಅವರು, ಮೊದಲ ತಿಂಗಳ ಹೆಚ್ಚುವರಿ ವೇತನ 50 ಸಾವಿರ ರೂ.ಗಳ ಚೆಕ್ನ್ನು ಪಟ್ಟಣದ ಅ.ನ. ಕುಂದಾಪುರ ಮತ್ತು ಬಿ.ಬಿ. ಪದಕಿ ಟ್ರಸ್ಟ್ಗೆ ನೀಡಿದ್ದಾರೆ.
ಪಟ್ಟಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಿವೃತ್ತ ಶಿಕ್ಷಕ ದಿ. ಬಿ.ಬಿ. ಪದಕಿ ಗುರುವಂದನಾ ಸಮಾರಂಭದಲ್ಲಿ ಅ.ನ. ಕುಂದಾಪುರ ಮತ್ತು ಬಿ.ಬಿ. ಪದಕಿ ಟ್ರಸ್ಟ್ನ ಶೈಕ್ಷಣಿಕ ಉದ್ದೇಶಗಳಿಗೆ ವಿನಿಯೋಗಿಸಲು ತಮ್ಮ ಮೊದಲ ತಿಂಗಳದ ಹೆಚ್ಚುವರಿ ವೇತನದ ಮೊತ್ತವನ್ನು ನೀಡುವುದಾಗಿ ತಿಳಿಸಿದ್ದರು. ಅದರಂತೆ ಟ್ರಸ್ಟ್ನ ಪದಾಧಿಕಾರಿಗಳಿಗೆ ಶುಕ್ರವಾರ ಚೆಕ್ ಹಸ್ತಾಂತರಿಸಿದರು.
ತಾಲೂಕಿನ ಜನತೆ ಪ್ರೀತಿ, ವಿಶ್ವಾಸದಿಂದ ಆಶೀರ್ವದಿಸಿರುವ ಕಾರಣ ಶಾಸಕನಾಗಿದ್ದೇನೆ. ಈಗಾಗಲೇ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇನೆ. ಸಮುದಾಯ ಹಾಗೂ ವೈಯಕ್ತಿಕ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮುಂದೆಯೂ ಈ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.
ಅ.ನ. ಕುಂದಾಪುರ ಹಾಗೂ ಬಿ.ಬಿ. ಪದಕಿ ಟ್ರಸ್ಟ್ನ ಕಾರ್ಯದರ್ಶಿ ಗಿರೀಶ ದೇಶಪಾಂಡೆ, ಖಜಾಂಚಿ ಶರಶ್ಚಂದ್ರ ದೇಸಾಯಿ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಪ್ರಮುಖರಾದ ಆರ್.ಸಿ. ದೇಸಾಯಿ, ಡಿ.ಜಿ. ಕುಲಕರ್ಣಿ ಇದ್ದರು.
ಶಾಸಕರಿಗೆ ಮಾನೆ ಮಾದರಿ: ಶಾಸಕರ ವೇತನ ದುಪ್ಪಟ್ಟು ಮಾಡಿ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧೇಯಕ ಅಂಗೀಕರಿಸಿದ ಮರುದಿನವೇ ಹೆಚ್ಚಾದ ವೇತನದ ಮೊತ್ತವನ್ನು ತಾಲೂಕಿನ ಸರ್ಕಾರಿ ಶಾಲೆ, ಕಾಲೇಜುಗಳ ಮೂಲಭೂತ ಸೌಲಭ್ಯ ದೊರಕಿಸಲು ವಿನಿಯೋಗಿಸುವುದಾಗಿ ಪ್ರಕಟಿಸುವ ಮೂಲಕ ರಾಜ್ಯದ ಎಲ್ಲ ಶಾಸಕರಿಗೆ ಶ್ರೀನಿವಾಸ ಮಾನೆ ಮಾದರಿಯಾಗಿದ್ದಾರೆ.
