ಹೊಸಪೇಟೆ: ಹಂಪಿ ಉತ್ಸವದ ಕೊನೇ ದಿನವಾದ ಶನಿವಾರ ರಾತ್ರಿ ಬಾಲಿವುಡ್ ಗಾಯಕಿ ನೀತಿ ಮೋಹನ್ ಎರಡು ಗಂಟೆ ಕಾಲ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಯುವಜನತೆಯನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.
ಶ್ರೀಕೃಷ್ಣ ದೇವರಾಯ ಮುಖ್ಯ ವೇದಿಕೆ ಮೇಲೆ ರಾತ್ರಿ 11 ಗಂಟೆಗೆ ಹಾಡು ಆಡಲು ಆರಂಭಿಸಿದ ಗಾಯಕಿ ನೀತಿ ಮೋಹನ್, ಮಧ್ಯರಾತ್ರಿ 1 ಗಂಟೆವರೆಗೆ ಬಾಲಿವುಡ್, ಪಂಜಾಬಿ ಗೀತೆಗಳನ್ನು ಸ್ಟೆಪ್ ಹಾಕುತ್ತಾ ಹಾಡಿ ನೆರೆದವರನ್ನು ಮನರಂಜಿಸಿದರು. ಬಾಲಿವುಡ್ ಹಾಡುಗಳಿಗೆ ಯುವಸಮೂಹ, ಮಕ್ಕಳು ಕುಣಿದು ಸಂಭ್ರಮಿಸಿದರು. ಇದೇ ವೇಳೆ ಕೆಲವರು ಚೇರ್ಗಳಿಗೆ ತೊಡಿಸಿದ ಬಟ್ಟೆಯ ಚೀಲಗಳನ್ನು ಕಿತ್ತು ಜನರ ಕಡೆ ಎಸೆದರು. ಇವು ಮಕ್ಕಳು, ಮಹಿಳೆಯರು, ವಿಐಪಿ, ವಿವಿಐಪಿ ಹಾಗೂ ಪೊಲೀಸರ ಮೇಲೆ ಬೀಳುತ್ತಿದ್ದಂತೆ ಗಣ್ಯರ ವೇದಿಕೆಯಲ್ಲಿದ್ದ ಪ್ರೇಕ್ಷಕರು ಕಾಲ್ಕಿತ್ತರು. ಹಿಂದಿದ್ದ ಪ್ರೇಕ್ಷಕರಿಗೆ ಕಾಣಿಸದಂತೆ ಯುವಕರು ಕುಣಿದು ಕಿರಿಕಿರಿ ಉಂಟು ಮಾಡುತ್ತಿದ್ದರಿಂದ ಡಿವೈಎಸ್ಪಿ ರಘುಕುಮಾರ ಹಾಗೂ ಸಿಬ್ಬಂದಿ ಗದರಿಸುತ್ತಿದ್ದಂತೆ ಉಳಿದವರು ಚೇರ್ಗಳನ್ನು ಎಳೆದುಕೊಂಡು ಕುಳಿತರು. ಯುವಕರ ನೂಕುನುಗ್ಗಲು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಹಂಪಿ ಉತ್ಸವದ ಮುಖ್ಯವೇದಿಕೆಯಲ್ಲಿ ಕನ್ನಡದ ಹೆಸರಾಂತ ಗಾಯಕರಿಂದ ಕನ್ನಡದ ಗಾಯನ ಮೊಳಗಲಿಲ್ಲ ಎಂಬ ನಿರಾಸೆ ಕಾಡಿತು. ರಾತ್ರಿ 12ಗಂಟೆವರೆಗೂ ಹಂಪಿಗೆ ಬರುವ ಬಸ್ಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಹಂಪಿ ಉತ್ಸವ ಮೂರ ದಿನ ಆಯೋಜಿಸಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ಪ್ರವಾಸಿಗರಿಂದ ಕೇಳಿಬಂತು.