< ಗುರಿಕಾರರ ಸಮಾವೇಶ, ಸಾಮೂಹಿಕ ವಿವಾಹ ವೀಳ್ಯಶಾಸ್ತ್ರ ಕಾರ್ಯಕ್ರಮದಲ್ಲಿ ಡಾ.ಜಿ.ಶಂಕರ್ ಹೇಳಿಕೆ>
ಉಡುಪಿ: ಸಾಮಾಜಿಕ ಆಗುಹೋಗುಗಳ ಬಗ್ಗೆ ಗುರಿಕಾರರು ಚಿಂತನೆ ಮಾಡಬೇಕು. ಮೊಗವೀರರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಸದಾ ಕಾಳಜಿ ವಹಿಸುತ್ತಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಗುರುವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಗುರಿಕಾರರ ಸಮಾವೇಶ ಮತ್ತು ಮತ್ಸೃಜ್ಯೋತಿ ಗೌರವ ಪುರಸ್ಕಾರ, ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ವಿನಯ ಕರ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರಿಕಾರರು ಮೊಗವೀರ ಸಮಾಜದ ಪರಂಪರೆ ಎತ್ತಿ ಹಿಡಿಯುವವರು. ಸಮಾಜದ ಅಭಿವೃದ್ಧಿಯಲ್ಲಿ ಮೊಗವೀರ ಸಮುದಾಯದ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಮೊಗವೀರ ಸಮಾಜದ ಕೂಡುಕಟ್ಟಿನ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿಕೊಂಡು ಬಂದ ಬೆಳ್ಳಂಪಳ್ಳಿ ಮೊಗವೀರ ಗ್ರಾಮಸಭಾ, ಮಣಿಪುರ ಮೊಗವೀರ ಸಭಾ, ಕುಂದಾಪುರದ ನಾರಾಯಣ ಮೊಗವೀರ ಸಭಾವನ್ನು ಗೌರವಿಸಲಾಯಿತು. 41 ಜೋಡಿಗಳಿಗೆ ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಮಾಡಲಾಯಿತು. ಗುರಿಕಾರರ ಸಂಪ್ರದಾಯದ ಬಗ್ಗೆ ಹೋಬಳಿ ಗುರಿಕಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಬೆಣ್ಣೆಕುದ್ರು-ಬಾರಕೂರಿನ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ವಿಶ್ವನಾಥ ಮಾಸ್ತರ್ ಮಾತನಾಡಿದರು. ಮೊಗವೀರ ಯುವ ಸಂಘಟನೆ ನಿಕಟಪೂರ್ವ ಅಧ್ಯಕ್ಷ ಗಣೇಶ್ ಕಾಂಚನ್, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘ ಶಾಖಾಧ್ಯಕ್ಷ ಕೆ.ಕೆ.ಕಾಂಚನ್, ಉದ್ಯಮಿ ಶಿವ ಬಿ. ಅಮೀನ್ ಉಪಸ್ಥಿತರಿದ್ದರು. ಸತೀಶ್ ಎಂ.ನಾಯ್ಕ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ನಿರೂಪಿಸಿ, ಶಿವರಾಂ ಕೆ.ಎಂ. ವಂದಿಸಿದರು.
ಮತ್ಸೃಜ್ಯೋತಿ ಪುರಸ್ಕಾರ: ಕೋಟೇಶ್ವರದ ಲಕ್ಷ್ಮೀ ಮರಕಾಲ್ತಿ, ಕುಂದಾಪುರದ ಸುಶೀಲಾ ಮೊಗೇರ್ತಿ, ಬೈಂದೂರಿನ ನಾಗಮ್ಮ, ಹಾಲಾಡಿಯ ಸುಶೀಲಾ ಮೊಗೇರ್ತಿ, ಕೋಟೇಶ್ವರದ ಲಕ್ಷ್ಮೀ ಮರಕಾಲ್ತಿ, ಹೆಮ್ಮಾಡಿ ಪರಮೇಶ್ವರಿ ಮೊಗವೀರ, ಸಾಲಿಗ್ರಾಮದ ರಾಧು ಕುಂದರ್, ಬ್ರಹ್ಮಾವರದ ಭಾಗಿ ಮರಕಾಲ್ತಿ, ಪೆರ್ಡೂರಿನ ಕಿಟ್ಟಿ ಸಾಲ್ಯಾನ್, ಉಪ್ಪೂರಿನ ಸರಸು ಮರಕಾಲ್ತಿ, ಪಡುಬಿದ್ರಿ ಸುನಂದಾ ಕರ್ಕೇರ, ಪಡುಬಿದ್ರಿಯ ಆನಂದಿ ಆರ್.ಕುಂದರ್, ಮಲ್ಪೆಯ ದೇವಿ ಕುಂದರ್, ಉಳ್ಳಾಲದ ಮೀನಾಕ್ಷಿ ಅವರಿಗೆ ಮತ್ಸೃಜ್ಯೋತಿ ಗೌರವ ಪುರಸ್ಕಾರ ನೀಡಲಾಯಿತು.