ನಾಪೋಕ್ಲು: ಬೇತು ಗ್ರಾಮದ ಮನೆಗೆ ಬೀಗ ಒಡೆದು ಕನ್ನ ಹಾಕಿದ ಚೋರರು ಕೋವಿ, ಬೆಳ್ಳಿಯ ಕತ್ತಿ ಹಾಗೂ ಗ್ಯಾಸ್ ಸಿಲಿಂಡರನ್ನು ಕಳ್ಳತನ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೇತು ಗ್ರಾಮದ ಮಕ್ಕಿ ಶಾಸ್ತವು ದೇವಾಲಯದ ಸಮೀಪ ವಾಸವಿರುವ ನಿವೃತ್ತ ಸೈನಿಕ ಕೊಂಡಿರ ನಂದ ಕುಮಾರ್ ಅವರ ಮನೆ ಕಳತನ ನಡೆದಿದೆ. ನಂದ ಕುಮಾರ್ ಅವರಿಗೆ ಅನಾರೋಗ್ಯದ ನಿಮಿತ್ತ ಇತ್ತೀಚೆಗೆ ಚಿಕಿತ್ಸೆಗೆಂದು ಬೆಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಯ ಬೀಗ ಒಡೆದು ಮನೆಯ ಕೋಣೆ ಒಳಗಿದ್ದ ಬೀರುಗಳನ್ನು ಒಡೆದು 40,000ಕ್ಕೂ ಅಧಿಕ ಮೌಲ್ಯದ ಬೆಳ್ಳಿಯ ಕತ್ತಿ, ಸಿಂಗಲ್ ಬೆರಲ್ ಕೋವಿ ಹಾಗೂ ಗ್ಯಾಸ್ ಸಿಲಿಂಡರನ್ನು ಕದ್ದು ಪರಾರಿಯಾಗಿದ್ದಾರೆ. ಗುರುವಾರ ನಂದ ಕುಮಾರ್ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ನಂದಕುಮಾರ್ ಪುತ್ರಿ ಭೋಜಮ್ಮ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಸ್ಥಳಕ್ಕೆ ಠಾಣಾ ಅಧಿಕಾರಿ ಮಂಜುನಾಥ, ಸಿಬ್ಬಂದಿ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು. ಕಳ್ಳರ ಪತ್ತೆಗಾಗಿ ಪೊಲೀಸರು ಬೆಲೆಬೀಸಿದ್ದಾರೆ.
