ಹನೂರು: ಮಲೆಮಹದೇಶ್ವರ ಬೆಟ್ಟದ ಹಸಿರೀಕರಣಕ್ಕೆ ಗಿಡ ನೆಡುವ ಕಾರ್ಯಕ್ರಮ ಸಹಕಾರಿಯಾಗಿದ್ದು, ಭವಿಷ್ಯದಲ್ಲಿ ಭಕ್ತರಿಗೆ ಅನುಕೂಲವಾಗಲಿದೆ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಚಾಮರಾಜನಗರ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಮುಖ್ಯ ರಸ್ತೆಯ ಹಮ್ಮಿಕೊಂಡಿದ್ದ ರಸ್ತೆ ಬದಿ 100 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದಪ್ಪನ ನೆಲೆಬೀಡಾದ ಮ.ಬೆಟ್ಟ ಅಸಂಖ್ಯಾತ ಭಕ್ತರನ್ನು ಹೊಂದಿರುವ ಧಾರ್ಮಿಕ ಪ್ರಸಿದ್ಧ ಯಾತ್ರಸ್ಥಳ. ಇಲ್ಲಿಗೆ ದೀಪಾವಳಿ, ಮಹಾ ಶಿವರಾತ್ರಿ, ಮಹಾಲಯ ಅಮಾವಾಸ್ಯೆ, ಯುಗಾದಿ ಸೇರಿದಂತೆ ಇನ್ನಿತರ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಶ್ರೀ ಕ್ಷೇತ್ರದಲ್ಲಿ ಉತ್ತಮ ಉತ್ತಮ ಪರಿಸರ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಮ.ಬೆಟ್ಟವನ್ನು ಈಗಾಗಲೇ ಪ್ಯಾಸ್ಟಿಕ್ ಮುಕ್ತ ಪ್ರದೇಶವಾಗಿ ಘೋಷಿಸಲಾಗಿದೆ. ಆದರೆ ಭಕ್ತರು ಇದರ ಪಾಲನೆ ಮಾಡದ ಕಾರಣ ಶ್ರೀ ಕ್ಷೇತ್ರದ ನೈರ್ಮಲ್ಯಕ್ಕೆ ತೊಡುಕಾಗಿದೆ. ಆದ್ದರಿಂದ ಭಕ್ತರು ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು ಎಂದರು.
ಅಲ್ಲದೆ ಈಶ್ವರಿ ಸೋಷಿಯಲ್ ಟ್ರಸ್ಟ್ನ ವೆಂಕಟೇಶ್ ಅವರು ಮ.ಬೆಟ್ಟದ ರಸ್ತೆ ಬದಿಯಲ್ಲಿ ಸಾಲು ಗಿಡಗಳನ್ನು ನೆಡುತ್ತಿರುವುದು ನಿಜಕ್ಕೂ ಪುಣ್ಯದ ಕೆಲಸ. ಇದರಿಂದ ಪರಿಸರ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಸಿರೀಕರಣಕ್ಕೆ ಉತ್ತೇಜನ ನೀಡಿದಂತಾಗಿದೆ. ಭವಿಷ್ಯದಲ್ಲಿ ಭಕ್ತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದಶಿ ಎ.ಈ ರಘು ಮಾತನಾಡಿ, ಮ.ಬೆಟ್ಟದಲ್ಲಿ ಪ್ರಾವಿತ್ರ್ಯತೆ ಹಾಗೂ ನೈರ್ಮಲ್ಯ ಕಾಪಾಡುವ ಸಲುವಾಗಿ ಪ್ಲಾಸ್ಟಿಕ್ ಬಳಕೆಗೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಶ್ರೀ ಕ್ಷೇತ್ರವನ್ನು ಹಸಿರುಮಯವಾಗಿಸುವ ಉದ್ದೇಶದಿಂದ ಮೈಕಾಪ್ಸ್ ಹಾಗೂ ಪ್ರಾಧಿಕಾರದ ಸಹಯೋಗದಲ್ಲಿ ಹಸಿರು ನಾಳೆ ಮಲೆಮಹದೇಶ್ವರ ಬೆಟ್ಟ 3 ವರ್ಷದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಾಗಾಗಿ ಗಿಡ ನೆಡುವ ಕಾರ್ಯಕ್ರಮ ಹಸಿರೀಕರಣಕ್ಕೆ ಪೂರಕವಾಗಲಿದೆ. ನೆಡುವ ಗಿಡಗಳಿಗೆ ಪ್ರಾಧಿಕಾರದಿಂದ ನೀರಿನ ಸೌಕರ್ಯ ಒದಗಿಸಿ ಅವುಗಳ ಬೆಳವಣಿಗೆಗೆ ಅಗತ್ಯ ಮುತುರ್ವಜಿ ವಹಿಸಲಾಗುವುದು ಎಂದರು.
ಈಶ್ವರಿ ಸೋಷಿಯಲ್ ಟ್ರಸ್ಟ್ ಸಂಸ್ಥಾಪಕ ಸಿ.ಎಂ ವೆಂಕಟೇಶ್, ಪತ್ನಿ ಜಯಲಕ್ಷ್ಮೀ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸ್ವಾಮಿ ಪೊನ್ನಾಚಿ, ಸಾಹಿತಿ ಕುಮಾರನಪುರ ರವಿಕುಮಾರ್, ಮೈಸೂರಿನ ಚಾರ್ಟಡ್ ಅಕೌಂಟೆಂಟ್ ಸುಬ್ರಹ್ಮಣ್ಯ, ಮುಖಂಡರಾದ ಶಿವಕುಮಾರ್, ನಾಗೇಶ್, ಪ್ರಕಾಶ್, ಮಹೇಂದ್ರ, ಶಿವು ಇತರರಿದ್ದರು.