ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ್ ಬಜೆಟ್ಗೆ ಅಂತಿಮ ಸಿದ್ಧತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಪ್ರಮುಖ ಯೋಜನೆಗಳು ಸೇರಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿದ ಡಿಸಿಎಂ ಡಿ.ಕೆ.ಶಿವಕುಮಾರ್ ನಿರೀಕ್ಷಿಸಿದ್ದಾರೆ.
ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಪಿಆರ್ಆರ್, ಬಿಸಿನೆಸ್ ಕಾರಿಡಾರ್, ನೀರು ಸರಬರಾಜು ಸೇರಿ ಅನೇಕ ಪ್ರಮಖ ಯೋಜನೆಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಯೋಜನೆಗಳಿಗೆ 2025-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಅನುದಾನ ನೀಡಬೇಕೆಂದು ಸಚಿವೆ ನಿರ್ಮಲಾ ಸೀತಾರಾಮನ್ಗೆ ಡಿ.ಕೆ. ಶಿವಕುಮಾರ್ ಪತ್ರ ಬರೆದು ಕೋರಿದ್ದು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವುದನ್ನು ನೆನಪಿಸಿದ್ದಾರೆ.
ದೇಶದ ಪ್ರಗತಿಗೆ ಆಸರೆ
ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸಿ, ಆರ್ಥಿಕ ಪ್ರಗತಿಗೆ ನೆರವಾಗಿದೆ. ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಪರಿಣಾಮ, ನಗರದ ಜನಸಂಖ್ಯೆ 1.50 ಕೋಟಿ ಸನಿಹದಲ್ಲಿದೆ. ಹೀಗಾಗಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಮಾಡಿ ಬೆಂಗಳೂರನ್ನು ದೇಶದ ಸಿಲಿಕಾನ್ ವ್ಯಾಲಿ ಎಂಬ ಹಿರಿಮೆ ಉಳಿಸಿಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.
ಯೋಜನಾವಾರು ವೆಚ್ಚ
ಸಂಚಾರ ದಟ್ಟಣೆ ನಿವಾರಣೆಗೆ ಎರಡು ಹಂತದ ಒಟ್ಟು 44 ಕಿ.ಮೀ. ಸುರಂಗ ರಸ್ತೆ ನಿರ್ಮಾಣಕ್ಕೆ 40 ಸಾವಿರ ಕೋಟಿ ರೂ., ವೆಚ್ಚವಾಗಲಿದೆ. 19 ಸಾವಿರ ಕೋಟಿ ರೂ. ಮೌಲ್ಯದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಲಾಗಿದೆ.
ಡಬಲ್ ಡೆಕ್ಕರ್ ಮೇಲ್ಸೇತುವೆ, ಮೆಟ್ರೋ ಸೇರಿ ಎಲಿವೇಟೆಡ್ ಕಾರಿಡಾರ್ 45 ಕಿ.ಮೀ. ಉದ್ದ, ಹೆಚ್ಚುವರಿ 8,916 ಕೋಟಿ ರೂ., 17 ಮೇಲ್ಸೇತುವೆ, 300 ಕಿ.ಮೀ. ಬರ್ ವಲಯದ 300 ಕಿ.ಮೀ. ರಸ್ತೆಗೆ ಮೂರು ಸಾವಿರ ಕೋಟಿ ರೂ., 99.50 ಕಿ.ಮೀ. ಉದ್ದದ 17 ಮೇಲ್ಸೇತುವೆಗಳಿಗೆ 12 ಸಾವಿರ ಕೋಟಿ ರೂ., ಅಂದಾಜಿದೆ.
ಅಷ್ಟಪಥಗಳ 73.04 ಕಿ.ಮೀ. ಉದ್ದದ ಬಿಸಿನೆಸ್ ಕಾರಿಡಾರ್ಗೆ 27 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಕಾವೇರಿ ಆರನೇ ಹಂತದಡಿ 2028ರ ವೇಳೆಗೆ ಪ್ರತಿದಿನ 500 ದಶಲಕ್ಷ ಲೀಟರ್ ಪೂರೈಸುವ ಯೋಜನೆಗೂ ನೆರವು ನೀಡಲು ಡಿ.ಕೆ.ಶಿವಕುಮಾರ್ ಕೋರಿದ್ದಾರೆ.