ಇಂಡಿ: ಜನರಿಗೆ ಅತಿ ಅವಶ್ಯವಿರುವ ವಿವಿಧ ಆರೋಗ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಬರುವಂತೆ ಸರ್ಕಾರ ಮಾಡುತ್ತಿರುವುದು ಸಂತಸ ತಂದಿದೆ. ಕ್ಷೇತ್ರದ ಜನತೆ ಆರೋಗ್ಯ ಇಲಾಖೆ ಸೇವೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯುನಾನಿ ಘಟಕ ಪ್ರಾರಂಭೋತ್ಸವ, ಇಂಡಿ ತಾಲೂಕು ಆರೋಗ್ಯ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿ ಕೆಲ ಸೌಲಭ್ಯವಿಲ್ಲದ್ದಕ್ಕಾಗಿ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗಲಿ, ಮಿರಜ ಅಥವಾ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಹೋಗಬೇಕಾಗುತ್ತಿತ್ತು. ಇದರಿಂದ ಸಾಕಷ್ಟು ಹಣ ಕೂಡ ಖರ್ಚಾಗುತ್ತಿತ್ತು. ಆದರೆ ಈಗ ನಮ್ಮ ಕ್ಷೇತ್ರದಲ್ಲಿ ಎಲ್ಲ ಸೌಲಭ್ಯಗಳು ಸಿಗುತ್ತಿವೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸಂಪತಕುಮಾರ ಗುಣಾರಿ ಮಾತನಾಡಿ, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಬಡ ಜನರಿಗೆ ಐದು ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ ಎಂದರು.
ಸಾಂಕ್ರಾಮಿಕ ರೋಗಗಳಿಂದ ಬಳಲುವ ರೋಗಿಗಳಿಗೆ ಮನೆ ಮನೆಗೆ ಹೋಗಿ ಗೃಹ ಆರೋಗ್ಯ ಕಾರ್ಯಕ್ರಮದಡಿ ಪರೀಕ್ಷೆ ಮತ್ತು ಔಷಧ ವಿತರಣೆ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ. ಸಾರ್ವಜನಿಕರು ಸಹಕರಿಸಿದರೆ ಇನ್ನೂ ಹೆಚ್ಚಿನ ಸೇವೆ ನೀಡುತ್ತೇವೆ ಎಂದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಸ್.ಇಂಗಳೆ ಮಾತನಾಡಿ, ಪ್ರಯೋಗಾಲಯ, ರಕ್ತ ಶೇಖರಣಾ ಘಟಕ, ಅತ್ಯಾಧುನಿಕ ಯಂತ್ರಗಳು, ಡಿಜಿಟಲ್ ಎಕ್ಸ ರೇ ಯಂತ್ರ, ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ಸೇರಿ ಅನೇಕ ಸೌಲಭ್ಯಗಳು ಆಸ್ಪತ್ರೆಯಲ್ಲಿವೆ ಎಂದರು.
ಟಿಎಚ್ಒ ಡಾ.ಕೃಷ್ಣಕುಮಾರ ಜಾಧವ, ಶಿವಾಜಿ ಮಾನೆ ಮಾತನಾಡಿದರು. ಆರೋಗ್ಯ ಇಲಾಖೆಯ ನಾಮ ನಿರ್ದೇಶಿತ ಸದಸ್ಯರಾದ ರಾಜು ಪತಂಗೆ, ಸತೀಶ ಕುಂಬಾರ, ಡಾ.ರಾಜಶೇಖರ ತೋಳನೂರ, ಸುಧೀರ ಕರಕಟ್ಟಿ, ಪ್ರಭು ನಾಡಗೌಡ, ಜಹಾಂಗೀರ ಸೌದಾಗರ ಇತರರಿದ್ದರು.
ಡಾ.ರಾಜೇಶ ಕೋಳೆಕರ, ಡಾ.ರವಿ ಭತಗುಣಕಿ, ಜಗದೀಶ ಬಿರಾದಾರ, ಪ್ರಸನ್ನ ಗಜಾಕೋಶ, ಶ್ರುತಿ ಕುಂಬಾರ, ಡಾ.ಅನೀಲ ರಾಠೋಡ, ಸತೀಶ ಪಾಟೀಲ, ಪ್ರಶಾಂತ ಧೂಮಗೊಂಡ, ಡಾ.ವಿಪುಲ್ ಕೋಳೆಕರ ಇತರರಿದ್ದರು.