ಹುಣಸೂರು: ರೈತರು ಬೆಳೆದ ರಾಗಿ ಫಸಲು ದಲ್ಲಾಳಿಗಳ ಪಾಲಾಗುತ್ತಿದ್ದು ಶೀಘ್ರ ರಾಗಿ ಖರೀದಿ ಕೇಂದ್ರ ತೆರೆಯಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.
ಸಕಾಲದಲ್ಲಿ ರಾಗಿ ಕೇಂದ್ರವನ್ನು ತೆರೆಯದ ಕಾರಣ ರೈತರು ತಾವು0 ಬೆಳೆದಿರುವ ರಾಗಿಯನ್ನು ದಲ್ಲಾಳಿಗಳ ಪಾಲು ಮಾಡುತ್ತಿದ್ದಾರೆ. ಖರೀದಿ ಕೇಂದ್ರದ ಲಾಭವನ್ನು ದಲ್ಲಾಳಿಗಳು ಪಡೆಯುತ್ತಿದ್ದಾರೆ. ಸರ್ಕಾರ ಸಕಾಲದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯದೆ ಪರೋಕ್ಷವಾಗಿ ರೈತರನ್ನು ಶೋಷಣೆ ಮಾಡುತ್ತಿದೆ. ರೈತ ಬೆಳೆಯುವ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ಸರ್ಕಾರ ನಿಗದಿಪಡಿಸದೆ ಹರಾಜು ಮಾಡುವಂತ ಪರಿಸ್ಥಿತಿಯಲ್ಲಿ ಇದ್ದಾರೆ. ಕನಿಷ್ಠ ಖರೀದಿ ಕೇಂದ್ರವನ್ನಾದರೂ ಸಕಾಲದಲ್ಲಿ ಸರ್ಕಾರ ತೆರೆದರೆ ರೈತರಿಗೆ ಬಹಳ ಅನುಕೂಲವಾಗುತ್ತದೆ. . ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದರೂ ಕೂಡ ಇತ್ತ ಗಮನಹರಿಸುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸರ್ಕಾರದ ಆದೇಶ ಬರಬೇಕು ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ಬೇಡವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಹಣ ದುರುಪಯೋಗ ಮಾಡುತ್ತಿದೆ. ಮತ ಗಳಿಸುವ ಕಾರ್ಯವನ್ನು ಬಿಟ್ಟರೆ ರೈತರಿಗೆ ಅನುಕೂಲವಾಗುವ ಕಾರ್ಯ ಮಾಡಲು ಹಿಂದೇಟು ಹಾಕುತ್ತಿದ್ದು, ರೈತ ನಿರಂತರ ಸಾಲದ ಸುಳಿಗೆ ಸಿಲುಕುತ್ತಿದ್ದಾನೆ. ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ರೈತ ಸಂಘವು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.