ಕೆ.ಕೆಂಚಪ್ಪ ಮೊಳಕಾಲ್ಮೂರು: ಶತಮಾನೋತ್ಸವ ಆಚರಿಸಲು ಸಜ್ಜಾಗಿರುವ ಮೊಳಕಾಲ್ಮೂರಿನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲವಾಗಿದ್ದು ಬೀಳುವ ಹಂತದಲ್ಲಿದೆ. ಶಾಲೆಯ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಹೆಂಚುಗಳು ಒಡೆದಿವೆ. ಸುಣ್ಣ-ಬಣ್ಣ ಹಚ್ಚಿಲ್ಲ. ಮರ ಮುಟ್ಟುಗಳನ್ನು ಗೆದ್ದಲು ತಿಂದಿವೆ. ಮಳೆ ಬಂದರೆ ನೀರು ಸೋರುತ್ತದೆ. ಇಂಥ ಕಟ್ಟಡದ ಕೆಳಗೆ ನಿತ್ಯ ಪಾಠ-ಪ್ರವಚನ ನಡೆಯುತ್ತಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ದುರಸ್ತಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ತಾಲೂಕಿನ ಬಹುತೇಕ ಬುದ್ಧಿವಂತರು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ಮೊಳಕಾಲ್ಮೂರಿನ ಸರ್ಕಾರಿ ಶಾಲೆಗಳ ಪೈಕಿ ಇದೇ ದೊಡ್ಡದು ಎಂಬ ಹೆಗ್ಗಳಿಕೆ ಇದಕ್ಕಿದೆ. 1 ರಿಂದ 7ನೇ ತರಗತಿ ವರೆಗಿನ 110 ಮಕ್ಕಳು ಇಲ್ಲಿ ಓದುತಿದ್ದಾರೆ. ಶಾಲೆ ಸುತ್ತ ಕಾಂಪೌಂಡ್ ಇಲ್ಲ. ಮೂಲ ಸೌಕರ್ಯ ಕೊರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
1923ರಲ್ಲಿ ಉದ್ಘಾಟನೆಯಾದ ಈ ಶಾಲೆ ಒಂದು ತಲೆಮಾರಿಗೆ ಅಕ್ಷರ ದಾಸೋಹ ನೀಡಿದೆ. 30 ಮಕ್ಕಳ ದಾಖಲಾತಿಯಿಂದ ಆರಂಭವಾದ ಈ ಶಾಲೆಯಲ್ಲಿ ಒಂದು ಕಾಲದಲ್ಲಿ 1,100 ಮಕ್ಕಳಿದ್ದರು. ನೂರರ ಸಂಭ್ರಮದಲ್ಲಿರುವ ಶಾಲೆ ಕಾಯಕಲ್ಪದ ಬಗ್ಗೆ ಸರ್ಕಾರ ಮತ್ತು ಇಲಾಖೆ ಮರೆತಿರಬಹುದು. ಇಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ಆರ್ಥಿಕವಾಗಿ ಕೈಜೋಡಿಸಿ ತುರ್ತು ಪ್ರಗತಿಗೆ ಒಲವು ತೋರಬೇಕಿದೆ.
ನಾವು ವಿದ್ಯೆ ಕಲಿತ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದೆ. ಇದರ ನವೀಕರಣದ ಜತೆ ಆವರಣದಲ್ಲಿ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಶ್ರೀನಿವಾಸಮೂರ್ತಿ ಮೊಳಕಾಲ್ಮೂರು
ಶಾಲೆಯ ಮೂಲ ಸೌಕರ್ಯಕ್ಕೆ ಅನುದಾನ ಬಿಡುಗಡೆಯಾಗಿದೆ. ಕಾಂಪೌಂಡ್, ಪ್ರತ್ಯೇಕ ಹೈಟೆಕ್ ಶೌಚಗೃಹದ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು.
ಸಿದ್ದಪ್ಪ, ಮುಖ್ಯಶಿಕ್ಷಕ
ಜೀವದ ಹಂಗುತೊರೆದು ಇಲ್ಲಿ ಓದುವ ಮಕ್ಕಳು ಮತ್ತು ಶಿಕ್ಷಕರ ಸುರಕ್ಷತೆ ಬಗ್ಗೆ ಆತಂಕದ ಛಾಯೆ ಇನ್ನೂ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಎಂ.ರುದ್ರಯ್ಯ, ನಿವೃತ್ತ ಶಿಕ್ಷಕ