ಲೋಕಾಪುರ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಎರಡು ವರ್ಷದಲ್ಲಿ 3400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 735 ಬಾಣಂತಿಯರು ಸಾವಿಗೀಡಾಗಿದ್ದಾರೆ, 1100 ನವಜಾತ ಶಿಶುಗಳು ಮೃತಪಟ್ಟಿವೆ. 50 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಹಾಲು, ಮೊಸರು, ತರಕಾರಿ, ಬಸ್ ದರ, ವಿದ್ಯುತ್ ಸೇರಿ ಸುಮಾರು 50 ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದರು.
ಕೇವಲ ಮಾತಿಗೆ ಮಾತ್ರ ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ. ಪದವೀಧರರಿಗೆ 3000 ರೂ., ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ರೂ. ಕೊಟ್ಟಿದ್ದೀರಾ? ಒಳಮೀಸಲಾತಿಯನ್ನು ಮೊದಲನೇ ಕ್ಯಾಬಿನೆಟ್ನಲ್ಲಿ ಕೊಡುತ್ತೀವಿ ಎಂದು ಹೇಳಿದ್ದರು. ಆದರೆ, ದಿನಾ ಒಂದೊಂದು ಕಥೆ ಹೇಳುತ್ತಾ ಹೊರಟಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ಬಗ್ಗೆ ಕಾಂಗ್ರೆಸ್ನವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಹೊಸ ಕಾಯ್ದೆಯಿಂದ ವಕ್ಫ್ ಆಸ್ತಿಗಳಿಂದ ಬರುವಂತಹ ಆದಾಯವನ್ನು ಮುಸ್ಲಿಂ ಜನಾಂಗದ ಶಿಕ್ಷಣಕ್ಕೆ, ಮಹಿಳೆಯರಿಗೆ, ಬಡವರ ಅಭಿವೃದ್ಧಿಗೆ ವಿನಿಯೋಗಿಸಲು ಅನುಕೂಲವಾಗುತ್ತದೆ ಎಂದರು.
ಮುಧೋಳ ತಾಲೂಕಿನ ಘಟಪ್ರಭಾ ನದಿಯಲ್ಲಿ ಸುಮಾರು 30 ಬೋಟ್ಗಳ ಮೂಲಕ ಆಕ್ರಮ ಮರಳುಗಾರಿಕೆ ನಡೆಸುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸದಿದ್ದರೆ ನದಿಪಾತ್ರದ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ನದಿಯಲ್ಲಿ ನೀರು ನಿಲ್ಲದಿದ್ದರೆ ಬೆಳೆಗಳಿಗೆ ನೀರುಣಿಸಲು ಸಾಧ್ಯವಿಲ್ಲ. ನದಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಮರಳಿಗಾರಿಕೆ ನಡೆಯುತ್ತಿದ್ದರೂ ನದಿ ಪಾತ್ರದ ಜನರು ಏಕೆ ಸುಮ್ಮನಾಗಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರಾದ ಮಹಾವೀರ ಟೋಪಣ್ಣವರ, ಬಿ.ಎಲ್.ಬಬಲಾದಿ, ಅರುಣ ಮುಧೋಳ, ರವಿಗೌಡ ಖಜ್ಜಿಡೋಣಿ, ಗೋಪಾಲಗೌಡ ಪಾಟೀಲ, ವಿಜಯಕಾಂತ ದೇಸಾಯಿ, ದಶರಥ ದೊಡಮನಿ, ಅನೀಲ ಹಂಚಾಟೆ, ಅಜಮೀರ ಮುಧೋಳ, ಗುಣಾಕರ ಶೆಟ್ಟಿ ಮತ್ತಿತರರಿದ್ದಾರೆ.