ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪೋರ್ಟಲ್, ಸ್ಟಾರ್ಟ್ಅಪ್ ಮತ್ತು ಮುದ್ರಾ ಯೋಜನೆಗಳಲ್ಲಿ ನೋಂದಣಿ ಮಾಡಿಕೊಂಡು ಯುವಕ ಮತ್ತು ಯುವತಿಯರು ನೌಕರಿಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆವೈಎನ್ಡಿಆರ್ವೈಎಲ್ (ಐಬಿಎಂ ಸ್ಪಿನ್) ನಿರ್ದೇಶಕ ಗಜಾನನ ಹೊನ್ನಾವರ ಹೇಳಿದರು.

ಇಲ್ಲಿಯ ಹೊಸೂರ ಉತ್ತರ ಕನ್ನಡ ವೈಶ್ಯ ಸಮಾಜ ಹಾಲ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹುಬ್ಬಳ್ಳಿ ಧಾರವಾಡ ಗೋಮಾಂತಕ ಸಮಾಜ ಸೇವಾ ಸಂಘದ 43ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಉದ್ಯೋಗಕ್ಕೆ ಒಳ್ಳೆಯ ಮತ್ತು ವಿಪುಲ ಅವಕಾಶಗಳಿದ್ದು, ವೆಬ್ ಸೈಟ್ ನಲ್ಲಿ ಹುಡುಕಿಕೊಳ್ಳಬಹುದು ಎಂದು ತಿಳಿಸಿದರು.
ಗೋವಾದ ಗೋಮಾಂತಕ ಮರಾಠಾ ಸಮಾಜದ ಕಾರ್ಯದರ್ಶಿ ಉತ್ಕರ್ಷ ಬನಸ್ತಕರ್ ಮಾತನಾಡಿ, ಮಹಿಳೆಯರು ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕೆಂದರು.
ರಣಜಿ ಮತ್ತು ರಾಯಲ್ ಚಾಲೆಂರ್ಜಸ್ ತಂಡದ ಪರ ಆಡಿದ್ದ ರಾಜು ಭಟ್ಕಳ್ ಮಾತನಾಡಿ, ಕ್ರಿಕೆಟ್ ನಲ್ಲಿ ಆಸಕ್ತಿ ಇರುವವರಿಗೆ ಸೂಕ್ತ ತರಬೇತಿ ನೀಡುವ ಭರವಸೆ ನೀಡಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾ ಪುರಸ್ಕಾರ, ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ಸಮಾಜದ ರಘುವೀರ ಅಂಕೋಲೆಕರ, ಪ್ರಮೀಳಾ ಕಿನ್ನರಕರ ಮತ್ತು ದತ್ತಾ ಬಾಂದೆಕರ್ ಅವರನ್ನು ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಮಿತಾ ಸುದರ್ಶನ್ ದೇವಳಿ ಮತ್ತು ಪ್ರಕಾಶ್ ಗೋಕರ್ಣರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಕೃಷ್ಣಕಾಂತ ಅಂಕೋಲೆಕರ ಅಧ್ಯಕ್ಷತೆ ವಹಿಸಿದ್ದರು. ಕವಿತಾ ನಾಯ್ಕ ವಂದಿಸಿದರು.