ನಾಲತವಾಡ: ಸಿಬಿಐ ಅಧಿಕಾರಿಗಳು ಎಂದು ಸೋಗು ಹಾಕಿದ ಇಬ್ಬರು ಅಪರಿಚಿತ ಖದೀಮರು ವೃದ್ಧರೊಬ್ಬರಿಂದ 3.5 ಗ್ರಾಂ ತೂಕದ ಚಿನ್ನದ ಸರ ಹಾಗೂ ಉಂಗುರವನ್ನು ಎಗರಿಸಿ ಪರಾರಿಯಾದ ಘಟನೆ ಸೋಮವಾರ ಪಟ್ಟಣದಲ್ಲಿ ಹಾಡಹಗಲೇ ನಡೆದಿದೆ.
ಮೋಸ ಹೋದವರು ಪಟ್ಟಣದ 8ನೇ ವಾರ್ಡ್ ನಿವಾಸಿ ಹಿರಿಯರಾದ ಎಂ.ಸಿ. ಕ್ಷತ್ರಿ ಎಂಬುವವರು. ಘಟನೆಯ ಬಗ್ಗೆ ಮುದ್ದೇಬಿಹಾಳ ಹೊರಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆಯ ವಿವರ: ಸೋಮವಾರ ನಡೆಯುವ ಸಂತೆಗೆಂದು ಬಸ್ ನಿಲ್ದಾಣದ ಮುಂಭಾಗ ವೃದ್ಧ ಎಂ.ಸಿ. ಕ್ಷತ್ರಿ ಕೈಚೀಲ ಹಿಡಿದು ತೆರಳುತ್ತಿದ್ದಾಗ. ಇಬ್ಬರು ಯುವಕರು ಇವರ ಬಳಿ ಬಂದು, ನಯವಾಗಿ ಮಾತನಾಡಿ, ತಾವು ಸಿಬಿಐ ಅಧಿಕಾರಿಗಳು ನಾಲತವಾಡ ಪಟ್ಟಣಕ್ಕೆ ಅನ್ಯ ರಾಜ್ಯದಿಂದ ಕಳ್ಳರ ಗ್ಯಾಂಗ್ ಬಂದಿದೆ. ಅವರು ಚಾಕು ತೋರಿಸಿ ಚಿನ್ನ ದೋಚಿ ಪರಾರಿಯಾಗುತ್ತಾರೆ. ಜಾಗೃತರಾಗಿರಿ ಎಂದು ಎಚ್ಚರಿಕೆ ನೀಡಿದರಲ್ಲದೇ, ವೃದ್ಧರು ಧರಿಸಿದ್ದ ಚಿನ್ನದ ಸರ ಹಾಗೂ ಉಂಗುರವಾಗಿ ಬಿಚ್ಚಿಸಿ ಅದನ್ನು ಒಂದು ಪೇಪರ್ನಲ್ಲಿ ಸುತ್ತಿ ಅದನ್ನು ವೃದ್ಧರ ಕೈಯಲ್ಲಿದ್ದ ಬ್ಯಾಗ್ನಲ್ಲಿ ಇಟ್ಟು, ಹುಷಾರಾಗಿರಿ ಎಂದು ಹೇಳಿ ಹೋಗಿದ್ದಾರೆ.
ಸ್ವಲ್ಪ ದೂರ ಹೋದ ನಂತರ ವೃದ್ಧರಿಗೆ ಅನುಮಾನ ಬಂದು ಬ್ಯಾಗ್ನಲ್ಲಿಟ್ಟಿದ್ದ ಪೇಪರ್ ಪೊಟ್ಟಣವನ್ನು ಬಿಚ್ಚಿ ನೋಡಿದರೆ ಅಲ್ಲಿ ಬಂಗಾರದ ಬದಲು ಮಣ್ಣು ಇತ್ತು. ಇದರಿಂದ ಗಾಬರಿಯಾದ ವೃದ್ಧರು ಹಿಂದಿರುಗಿ ನೋಡಿದಾಗ ಅಪರಿಚಿತರು ಬೈಕ್ನಲ್ಲಿ ಹೋಗುತ್ತಿರುವುದು ಕಂಡಿದೆ. ತಕ್ಷಣ ಬೇರೊಬ್ಬರ ಸಹಾಯದಿಂದ ಮತ್ತೊಂದು ಬೈಕ್ ಏರಿ ಕಳ್ಳರನ್ನು ಹಿಂಬಾಲಿಸಿದರಾದರೂ ಏನೂ ಪ್ರಯೋಜನವಾಗಿಲ್ಲ. ನಯವಂಚಕರು ಅಷ್ಟರಲ್ಲಾಗಲೇ ಪರಾರಿಯಾಗಿದ್ದರು. ಘಟನೆಗೆ ಸಂಬಂದಿಸಿದಂತೆ ಪಟ್ಟಣದ ಹೊರ ವಲಯದ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಸಂತೆಯಲ್ಲಿ ಕಳ್ಳರ ಹಾವಳಿ
ನಾಲತವಾಡ ಪಟ್ಟಣದಲ್ಲಿ ಸೋಮವಾರ ನಡೆಯುವ ಸಂತೆಗೆ ನೆರೆಯ ಯಾದಗಿರಿ, ರಾಯಚೂರು ಜಿಲ್ಲೆಯ ಹಲವು ಗ್ರಾಮಗಳಿಂದ ಜನರು ಆಗಮಿಸುತ್ತಾರೆ. ಸಂತೆ ದಿನ ಮೇಲಿಂದ ಮೇಲೆ ಒಂದಿಲ್ಲೊಂದು ಕಳ್ಳತನ ಘಟನೆಗಳು ನಡೆಯುತ್ತಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಪೊಲೀಸರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇಲ್ಲಿರುವ ಪೊಲೀಸ್ ಹೊರ ಠಾಣೆಗೆ ಎಎಸ್ಐ, ಓರ್ವ ಹವಾಲ್ದಾರ್, ಮೂವರು ಕಾನ್ಸ್ಟೇಬಲ್ ಕನಿಷ್ಠ ಕಾರ್ಯನಿರ್ವಹಿಸಬೇಕು. ಆದರೆ ಈ ಹೊರ ಠಾಣೆಯಲ್ಲಿ ಮೂವರು ಕಾನ್ಸ್ಟೇಬಲ್ ಮಾತ್ರವಿದ್ದಾರೆ. ಹೀಗಾಗಿ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಅಗತ್ಯ ಪೊಲೀಸ್ ಸಿಬ್ಬಂದಿ ಅಗತ್ಯವಿದೆ ಎಂದು ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ ಪತ್ರಿಕೆಗೆ ತಿಳಿಸಿದ್ದಾರೆ.