ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ತೀರ್ಥಹಳ್ಳಿ ಶಾಖಾ ಮಠ ಸಮಸ್ತ ಸಮಾಜದ ಧರ್ಮಸಂಘಟನೆಯ ಶಕ್ತಿ ಮತ್ತು ಶ್ರದ್ಧಾಕೇಂದ್ರವಾಗಿ ಬೆಳೆಯಬೇಕು. ಈ ಮಠ ಸಮಸ್ತರ ಮಠವಾಗಿ ಎಲ್ಲ ಸಮಾಜಗಳು ಒಗ್ಗೂಡಿ ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಪಣ ತೊಡುವ ಮಹತ್ಕಾರ್ಯವಾಗಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಧರ್ಮ ಸಂದೇಶ ದಯಪಾಲಿಸಿದರು.
ಇದೇ ಪ್ರಥಮ ಬಾರಿಗೆ ತೀರ್ಥಹಳ್ಳಿಯ ಶಾಖಾಮಠದಲ್ಲಿ ಭಾನುವಾರ ಆಯೋಜಿಸಲಾಗಿದ್ದ ನರಸಿಂಹ ಜಯಂತಿ ಉತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಿಷ್ಣು ನರಸಿಂಹ ಅವತಾರದ ಮೂಲಕ ಲೋಕಕ್ಕೆ ವಿಶೇಷವಾದ ದಿವ್ಯ ಸಂದೇಶವನ್ನು ಅನುಗ್ರಹಿಸಿದ ಪರಮಪುಣ್ಯ ದಿನ ಇಂದಿನದಾಗಿದೆ. ನಮ್ಮ ಅರಿವಿಗೆ ಬಾರದಂತೆ ದಾರಿ ತಪ್ಪಿ ಹೋಗುವ ಮನಸು ಸಂಸಾರ ಯಾತ್ರೆಯನ್ನು ವಿಷಮವಾಗಿರಿಸಿ ವಿನಾಶಕ್ಕೆ ನಾಂದಿಯಾಗುತ್ತದೆ. ಇದಕ್ಕೆ ಹಿರಣ್ಯಕಶ್ಯಪು ಸರ್ವಕಾಲೀನ ನಿದರ್ಶನವಾಗಿದ್ದಾನೆ. ನಮ್ಮೊಳಗೆ ನರಸಿಂಹನ ಅವತಾರ ನಾನಾ ವಿಧದಲ್ಲಿ ನಿತ್ಯ ಆಗುತ್ತದೆ. ಅದನ್ನು ಗಮನಿಸುವ ಮೂಲಕ ಅಂತರಂಗದ ಮೂರ್ತಿಯನ್ನು ದರ್ಶನ ಮಾಡುವ ಕಣ್ಣು ನಮ್ಮದಾಗಬೇಕು. ಈ ಮೂಲಕವಾಗಿ ಮಾತ್ರ ನಮ್ಮ ಮನಸು ಶುಷ್ಕವಾಗದಂತೆ ನಿಗ್ರಹಿಸಿ ಶ್ರೀ ನರಸಿಂಹನಂತೆ ನಮ್ಮಲ್ಲಿನ ಅಸುರೀಯ ಶಕ್ತಿಯನ್ನು ದಮನ ಮಾಡಲು ಸಾಧ್ಯ ಎಂದರು.
ಹೊಸನಗರ ಮಠ ಮತ್ತು ತೀರ್ಥಹಳ್ಳಿ ಮಠ ಭೂಮಿಯ ಎರಡು ಮಗ್ಗಲುಗಳಂತೆ. ಇಲ್ಲಿನ ಗಂಗಾವಿಶ್ವೇಶ್ವರ ಮಂದಿರವನ್ನು ಜೀಣೋದ್ಧಾರ ಮಾಡುವ ಮೂಲಕ ಇಡೀ ಸಮಾಜದ ಶಕ್ತಿತಾಣವಾಗಿ ತೀರ್ಥಹಳ್ಳಿಮಠ ಬೆಳೆದು ಬೆಳಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಉತ್ಸವ ಸಮಿತಿ ಗೌರವಾಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ಹಿಂದು ಸಮಾಜ ಒಗ್ಗೂಡಿದರೆ ಮಾತ್ರ ಭವಿಷ್ಯದಲ್ಲಿ ಸನಾತನ ಧರ್ಮಕ್ಕೆ ಒದಗಿಬರಬಹುದಾದ ಅಪಾಯವನ್ನು ತಪ್ಪಿಸಲು ಸಾಧ್ಯ ಎಂದರು.
ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ಕ್ಷೇತ್ರದ ಧರ್ಮಕರ್ತರಾದ ಭೀಮೇಶ್ವರ ಜೋಶಿ, ಹಿರಿಯ ಮುಖಂಡ ಕಿಮ್ಮನೆ ರತ್ನಾಕರ, ನಾಗಭೂಷಣ ಮಾತನಾಡಿದರು. ನಿರ್ವಹಣಾ ಸಮಿತಿಯ ಅಧ್ಯಕ್ಷ ಶಶಿಧರ ಬೊಬ್ಬಿ ಸಭಾಪೂಜೆ ನಡೆಸಿದರು. ಕಾರ್ಯದರ್ಶಿ ಕಾರ್ತಿಕ ಶರ್ಮಾ ಅವಲೋಕನ ಮಾಡಿದರು. ಹವ್ಯಕ ಮಹಾಮಂಡಲ ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಕಾರ್ಯದರ್ಶಿ ಜಿ.ಕೆ. ರಘು, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಉಪಾಧ್ಯಕ್ಷ ವೆಂಕಟೇಶ ಹಾರೇಬೈಲು, ಇತರರಿದ್ದರು.
ಕೇರಳದ ಕಣ್ಣೂರಿನ ರಾಘವಪುರ ಮಹಾಯೋಗಮ್ಂದ ಆಗಮಿಸಿದ ಶ್ರೀಮಠದ ನೂರಾರು ಶಿಷ್ಯರು ಮತ್ತು ರಾಜ್ಯದ ವಿವಿಧೆಡೆಗಳ ಶಿಷ್ಯಭಕ್ತರು ವಿಶೇಷವಾಗಿ ಉತ್ಸವದಲ್ಲಿ ಭಾಗವಹಿಸಿದ್ದರು.
