ಇಳಕಲ್ಲ(ಗ್ರಾ): ನಗರದ ಕಿಲ್ಲಾ ಭಾಗದಲ್ಲಿರುವ ಗ್ರಾಮದೇವತೆ ದ್ಯಾಮವ್ವದೇವಿ ದೇಗುಲ ಜೀರ್ಣೋದ್ಧಾರ, ದೇವಸ್ಥಾನ ಉದ್ಘಾಟನೆ ಅಂಗವಾಗಿ ಶುಕ್ರವಾರ ದ್ಯಾಮವ್ವದೇವಿ ಮೂರ್ತಿಯ ಭವ್ಯ ಮೆರವಣಿಗೆ ಸಂಭ್ರಮದಿಂದ ಸಂಚರಿಸಿತು.
ವಿಜಯಮಹಾಂತೇಶ ವೃತ್ತದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವೇಳೆ ಜನರು ತಮ್ಮ ತಮ್ಮ ಗಲ್ಲಿಗಳಲ್ಲಿ ಭಕ್ತಿಭಾವದಿಂದ ಬರಮಾಡಿಕೊಂಡು ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದಲೇ ವಿವಿಧ ಸಮಾಜಗಳ ಪದಾಧಿಕಾರಿಗಳು ದೇವಿ ಮೂರ್ತಿಗೆ ರುದ್ರಾಭಿಷೇಕ ಮಾಡಿಸಿ ಹರಕೆ ತೀರಿಸಿದರು. ಭಕ್ತರು ಸಿಹಿ ಅಡುಗೆ ನೈವೇದ್ಯ ಮಾಡಿ ತೆಂಗಿನಕಾಯಿ ಒಡೆಸಿ ಕೃತಾರ್ಥರಾದರು.
ಈ ವರ್ಷವೂ ಮಳೆ-ಬೆಳೆ ಸರಿಯಾಗಿರಲಿ, ಯಾವುದೇ ರೋಗ ರುಜಿನ ಕಾಡದಿರಲಿ ಎಂದು ಭಕ್ತರು ಗ್ರಾಮದೇವತೆಯಲ್ಲಿ ಬೇಡಿಕೊಂಡರು. ಮೆರವಣಿಗೆ ನಂತರ ಎಲ್ಲ ಭಕ್ತರಿಗೆ ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.