ಕೊಪ್ಪ: ಚಿಕ್ಕೋಡಿ ತಾಲೂಕಿನ ನಂದಿಪರ್ವತ ಕ್ಷೇತ್ರದ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಅವರ ಹತ್ಯೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ದಿಗಂಬರ ಜೈನ ಟ್ರಸ್ಟ್ ಪ್ರಮುಖರು ಮಂಗಳವಾರ ತಹಸೀಲ್ದಾರ್ ವಿ.ಎಸ್.ರಾಜು ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಜು.5ರಂದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಶರೀರವನ್ನು ತುಂಡು, ತುಂಡು ಮಾಡಿ ಕೊಳವೆ ಬಾವಿಯೊಳಗೆ ಹಾಕಿ ಕ್ರೂರತೆ ಮೆರೆದಿದ್ದಾರೆ. ಸಮಾಜದಲ್ಲಿ ಅಹಿಂಸೆ, ಶಾಂತಿಯ ಸಂದೇಶವನ್ನು ಸಾರುತ್ತ ಬರಿಗಾಲಿನಲ್ಲಿ ದೇಶದ್ಯಾಂತ ಸಂಚರಿಸುವ ಜೈನ ಮುನಿಗಳು ಯಾರಿಗೂ ತೊಂದರೆ ಮಾಡುವುದಿಲ್ಲ. ತ್ಯಾಗಿಗಳಾದ ಮುನಿಗಳನ್ನು ಹತ್ಯೆ ಮಾಡಿರುವುದು ನಾಗರಿಕ ಸಮಾಜಕ್ಕೆ ಆಘಾತ ಉಂಟುಮಾಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜೈನ ಸಮಾಜದ ಮೇಲೆ ನಿರಂತರವಾಗಿ ದಾಳಿಯಾಗುತ್ತಿರುವುದು ಆತಂಕ ಉಂಟುಮಾಡಿದೆ. ಮುಂದಿನ ದಿನದಲ್ಲಿ ಸರ್ಕಾರ ಜೈನ ಸಮಾಜಕ್ಕೆ ಹಾಗೂ ಸಾಧು ಸಂತರಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶ್ರೀ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ
ದಿಗಂಬರ ಜೈನ ಟ್ರಸ್ಟ್ನ ಪ್ರಮುಖರು ತಹಸೀಲ್ದಾರ್ ವಿ.ಎಸ್.ರಾಜು ಗೆ ಮನವಿ ಸಲ್ಲಿಸಿದರು.