ಬ್ಯಾಡಗಿ: ವಾಣಿಜ್ಯ ಬೆಳೆ ಶುಂಠಿ ದರ ಕುಸಿತದಿದ್ದು, ಬೆಳೆಯಲು ಖರ್ಚು ಮಾಡಿದ ಹಣವೂ ಬಾರದಂತಾಗಿ ಬೆಳೆಗಾರರು ಆತಂಕದಲ್ಲಿ ಮುಳುಗಿದ್ದಾರೆ. ನಾಲ್ಕು ವರ್ಷಗಳಿಂದ ಕ್ವಿಂಟಾಲ್ಗೆ 4ರಿಂದ 10 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಶುಂಠಿ, ಪ್ರಸಕ್ತ 2500-3000 ರೂ. ದರವಿದೆ.
ಜಿಲ್ಲೆಯ ಹಾನಗಲ್ಲ, ಬ್ಯಾಡಗಿ, ಶಿಗ್ಗಾಂವಿ, ಹಿರೇಕೆರೂರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಶುಂಠಿಯನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತಿದೆ. ಕಳೆದ 10-15 ವರ್ಷಗಳ ಹಿಂದೆ ಕೇರಳ ವ್ಯಾಪಾರಸ್ಥರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜಮೀನುಗಳನ್ನು ವಾರ್ಷಿಕ ಗುತ್ತಿಗೆ ಪಡೆದು ಶುಂಠಿಯನ್ನು ಉತ್ತಮವಾಗಿ ಬೆಳೆಯತೊಡಗಿದರು. ಬಳಿಕ ಜಿಲ್ಲೆಯಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಏರಿತು. ಬ್ಯಾಡಗಿ ಮೆಣಸಿನಕಾಯಿಯಂತೆ, ಜಿಲ್ಲೆಯ ಶುಂಠಿಗೂ ಹೆಚ್ಚು ಬೇಡಿಕೆಯಿದೆ.
ಬೆಲೆ ತೀವ್ರ ಇಳಿಕೆ:
ನಾಲ್ಕು ವರ್ಷಗಳಿಂದ ಕ್ವಿಂಟಾಲ್ಗೆ 4 ರಿಂದ 10 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಶುಂಠಿ, ಪ್ರಸಕ್ತ 2500-3000 ರೂ. ದರದಲ್ಲಿ ಖರೀದಿ ನಡೆದಿದೆ. 2024ರ ಫೆಬ್ರವರಿಯಲ್ಲಿ ದರ 6-10 ಸಾವಿರ ರೂ., ಬಳಿಕ ಏಪ್ರಿಲ್ನಲ್ಲಿ 12 ಸಾವಿರ ರೂ. ತಲುಪಿತ್ತು. ಹೊಸದಾಗಿ ಶುಂಠಿ ಬೆಳೆಯಲು ಮುಂದಾದ ರೈತರು ಏರಿಕೆಯಾಗಿದ್ದ ದರದಲ್ಲಿ ಬೀಜ ಖರೀದಿಸಿದ್ದರು. ಈಗ ಬೆಲೆ ಕುಸಿತ ಕಂಡ ಪರಿಣಾಮ ಬೆಳೆಗಾರರಿಗೆ ತೀವ್ರ ನಷ್ಟವಾಗುವಂತಾಗಿದೆ.
ಜಿಲ್ಲೆಯಲ್ಲಿ ಶುಂಠಿ ಮಾರುಕಟ್ಟೆ ಇಲ್ಲವಾಗಿದ್ದು, ಮಧ್ಯವರ್ತಿಗಳ ಕೈಯಲ್ಲಿ ಸಿಲುಕಿದ ಬೆಳೆಗಾರರ ಬದುಕು ಆತಂಕ ಎದುರಿಸಬೇಕಿದೆ. ಬೆಳೆಯನ್ನು ನೆಲದಲ್ಲಿ ಬಿಟ್ಟರೆ, ವಾರಕ್ಕೆ ಎರಡು ಬಾರಿ ನೀರುಣಿಸಬೇಕು. ಅಲ್ಲದೆ, ಕೊಳೆ ರೋಗ ಆವರಿಸುವ ಭಯ ಕಾಡುತ್ತಿದೆ.
ಚೀನಾ ಹಾಗೂ ಬಾಂಗ್ಲಾದೇಶಕ್ಕೆ ಶುಂಠಿ ರಫ್ತು ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಶುಂಠಿ ಒಣಗಿಸುವ ಸೌಲಭ್ಯ ಹಾಗೂ ಹಸಿ ಶುಂಠಿ ತೊಳೆಯುವ ಯಂತ್ರಗಳಿಲ್ಲ. ಶಿರಾಳಕೊಪ್ಪ, ಸಾಗರ, ಆನವಟ್ಟಿ ಸೇರಿದಂತೆ ಬೇರೆಡೆಯ ಖರೀದಿದಾರರೇ ನಿಗದಿಪಡಿಸಿದ ದರಕ್ಕೆ ಮಾರಾಟ ಮಾಡುವ ಸ್ಥಿತಿಯಿದೆ.
ಎಲ್ಲೆಲ್ಲಿ ಎಷ್ಟು ಹೆಕ್ಟೇರ್ ಬೆಳೆ?:
ಹಾನಗಲ್ಲ 1170, ಬ್ಯಾಡಗಿ 531 ಹಾವೇರಿ 18, ಹಿರೇಕೆರೂರ 678, ರಟ್ಟಿಹಳ್ಳಿ 121, ರಾಣೆಬೆನ್ನೂರ 21, ಶಿಗ್ಗಾಂವಿ 336, ಸವಣೂರ ತಾಲೂಕಿನಲ್ಲಿ 3 ಹೆಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್ನಲ್ಲಿ ಶುಂಠಿ ಬೆಳೆಯಿದೆ. ಹೆಚ್ಚಾಗಿ ಅರೆಮಲೆನಾಡು ಪ್ರದೇಶದ ಹಾನಗಲ್ಲ ತಾಲೂಕಿನ ಅಕ್ಕಿಆಲೂರು, ತಿಳವಳ್ಳಿ, ಆಡೂರು, ಬೊಮ್ಮನಹಳ್ಳಿ ಸುತ್ತಮುತ್ತ ಹೆಚ್ಚಾಗಿದೆ. 10 ವರ್ಷಗಳ ಹಿಂದೆ ನೂರಾರು ಹೆಕ್ಟೇರ್ನಲ್ಲಿದ್ದ ಶುಂಠಿ, ಈಗ ಸಾವಿರಾರು ಹೆಕ್ಟೇರ್ಗೆ ಹಬ್ಬಿದೆ.
ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಶುಂಠಿಗೆ ಕ್ವಿಂಟಾಲ್ಗೆ 5 ಸಾವಿರ ರೂಪಾಯಿ ನಿಗದಿಪಡಿಸಿದೆ. ರಾಜ್ಯ ಸರ್ಕಾರ ಕೇಂದ್ರ ತೆರೆದು ಹೆಚ್ಚುವರಿಯಾಗಿ 2 ಸಾವಿರ ರೂ. ನೀಡಿ ಶುಂಠಿ ಖರೀದಿಸಬೇಕು. ಬೆಲೆ ಕುಸಿತದಿಂದ ನಷ್ಟವಾದ ರೈತರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ರೈತರು ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದು, ಕೂಡಲೇ ಅಧಿಕಾರಿಗಳ ಸಭೆ ನಡೆಸಿ, ಸರ್ಕಾರಕ್ಕೆ ವರದಿ ಕಳುಹಿಸಬೇಕು.
| ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೈತ ಸಂಘ