ಸಕಲೇಶಪುರ: ತಾಲೂಕಿನ ಬನವಾಸೆ ಗ್ರಾಮದಲ್ಲಿ ಗುರುವಾರ ವಿದ್ಯುತ್ ಶಾಕ್ನಿಂದ ಸುಮಾರು 25 ವರ್ಷದ ದೈತ್ಯಾಕಾರದ ಒಂಟಿ ಸಲಗವೊಂದು ಮೃತಪಟ್ಟಿದೆ.
ಕಳೆದ ಹದಿನೈದು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಭಾಗದಿಂದ ಹಾಸನ ಜಿಲ್ಲೆಗೆ ಬಂದಿದ್ದ ಉದ್ದನೆ ದಂತವುಳ್ಳ ಒಂಟಿಸಲಗ ಹಾನುಬಾಳು, ಹುರಡಿ ಭಾಗದಲ್ಲಿ ಕಾಣಿಸಿಕೊಂಡಿತ್ತು. ಆದರೆ ಕಾಡಾನೆಗಳ ಗುಂಪಿನ ಜತೆ ಒಂಟಿಸಲಗ ಸೇರಿರಲಿಲ್ಲ. ಹೊಸ ಜಾಗದಲ್ಲಿ ಅಲೆದಾಡುತ್ತಿತ್ತು. ಎರಡು ದಿನಗಳ ಹಿಂದೆ ಆಲೂರು ತಾಲೂಕಿನ, ಹೊಲ್ಲಹಳ್ಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಎಂಬ ಯುವಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಇದೇ ಒಂಟಿಸಲಗ ಬುಧವಾರ ರಾತ್ರಿ ಬನವಾಸೆ ಗ್ರಾಮದ ಬಳಿ ಸಂಚಾರ ಮಾಡಿತ್ತು. ಬನವಾಸೆ ಗ್ರಾಮದ ಬಳಿ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಎಲೆಕ್ಟ್ರಿಕಲ್ ಡಿಯೋಲ್ ಐದರಿಂದ, ಆರಡಿ ಎತ್ತರದಲ್ಲಿದ್ದು ಆಹಾರ ಹುಡುಕಿಕೊಂಡು ಒಂಟಿಸಲಗ ಹೋಗುತ್ತಿದ್ದ ವೇಳೆ ಸೊಂಡಿಲು ಡಿಯೋಲ್ಗೆ ತಗುಲಿದ್ದು ವಿದ್ಯುತ್ ಶಾಕ್ನಿಂದ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದೆ.
ಬಿಎಸ್ಎನ್ಎಲ್ ಟವರ್ಗೆ 11 ಕೆವಿ ವಿದ್ಯುತ್ ಪೂರೈಸುವ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಎಲೆಕ್ಟ್ರಿಕಲ್ ಡಿಯೋಲ್ ಅತ್ಯಂತ ಕೆಳಮಟ್ಟದಲ್ಲಿ ಇರುವುದೇ ಕಾಡಾನೆ ಸಾವಿಗೆ ಕಾರಣವಾಗಿದ್ದು, ಕಂಬಗಳನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ತೋರಿರುವ ಸೆಸ್ಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕಳೆದ ಆರು ವರ್ಷಗಳಲ್ಲಿ ಹದಿನಾರು ಕಾಡಾನೆಗಳು ಮೃತಪಟ್ಟಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.
ಮೃತದೇಹ ನೋಡಲು ಮುಗಿಬಿದ್ದ ಜನ: ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಒಂಟಿಸಲಗದ ಚಲನವಲನ ಗಮನಿಸಲು ತೆರಳಿದ ವೇಳೆ ವಿದ್ಯುತ್ ಸ್ಪರ್ಶಿಸಿ ಒಂಟಿಸಲಗ ಸಾವನ್ನಪ್ಪಿರುವುದು ತಿಳಿದಿದೆ. ಕೂಡಲೇ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕಾಡಾನೆ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಕಾಡಾನೆ ಮೃತದೇಹವನ್ನು ನೋಡಲು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೆಲವರು ಕಾಡಾನೆಗೆ ನಮಸ್ಕಾರ ಮಾಡಿ ಪೂಜೆ ವಿಧಿವಿಧಾನಗಳನ್ನು ಸಲ್ಲಿಸುವ ಮುಖಾಂತರ ಅಂತಿಮ ವಿದಾಯ ಹೇಳಿದರು. ನಂತರ ಪಶುವೈದ್ಯರು ಸ್ಥಳದಲ್ಲೇ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಒಂಟಿಸಲಗ ಸಾವನ್ನಪ್ಪಿದ ಸ್ಥಳದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು. ಮೇಲ್ನೋಟಕ್ಕೆ ವಿದ್ಯುತ್ ಶಾಕ್ನಿಂದಲೇ ಕಾಡಾನೆ ಮೃತಪಟ್ಟಿರುವುದು ಕಂಡುಬಂದಿದೆ. ವಿದ್ಯುತ್ ಸೆಸ್ಕ್ ನಿರ್ಲಕ್ಷ್ಯ ಎಂಬ ಆರೋಪಗಳು ಕೇಳಿ ಬಂದಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಡಿಎಫ್ಒ ಸೌರಬ್ಕುಮಾರ್ ತಿಳಿಸಿದ್ದಾರೆ.
ಸ್ಥಳಕ್ಕೆ ಶಾಸಕ ಭೇಟಿ: ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಬಾಳ್ಳುಪೇಟೆಯಲ್ಲಿ ಎಲೆಕ್ಟ್ರಿಕ್ ವೈರ್ಗೆ ಸೊಂಡಿಲು ಹಾಕಿ ಕಾಡಾನೆಯೊಂದು ಮೃತಪಟ್ಟಿರುವುದು ದುಃಖದ ವಿಷಯ. ಕಾಡಾನೆಗಳು ಆಹಾರ ಹಾಗೂ ಇನ್ನಿತರ ಸಮಸ್ಯೆಗಳಿಂದ ನಗರಗಳ ಕಡೆ ಬರುತ್ತಿವೆ. ಕಳೆದ ವಾರ ವನಗೂರು ಭಾಗದಲ್ಲಿ ಕಾಡಾನೆಯೊಂದು ಮೃತಪಟ್ಟಿದ್ದು ಇದೀಗ ಮತ್ತೊಂದು ಕಾಡಾನೆ ಮೃತಪಟ್ಟಿರುವುದು ಅತ್ಯಂತ ಬೇಸರದ ಸಂಗತಿ. ಗಾತ್ರದಲ್ಲಿ ದೊಡ್ಡದಾಗಿರುವ ಕಾಡಾನೆ ವಿದ್ಯುತ್ ತಂತಿ ಮುಟ್ಟಿ ಕೇವಲ ಒಂದು ನಿಮಿಷದಲ್ಲಿ ಮೃತಪಟ್ಟಿದೆ. ಮಲೆನಾಡಿನಲ್ಲಿ ಕಾಡಾನೆಗಳಿಗೂ ನೆಮ್ಮದಿ ಇಲ್ಲ, ರೈತರಿಗೂ ನೆಮ್ಮದಿ ಇಲ್ಲ. ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ನಾನು ಹಲವು ಬಾರಿ ಮನವಿ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೂರು ದಾಖಲು: ಒಂಟಿ ಸಲಗ ಸಾವಿಗೆ ಸೆಸ್ಕ್ ನಿರ್ಲಕ್ಷ್ಯವೇ ಕಾರಣ ಎಂದು ಅರಣ್ಯ ಇಲಾಖೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.