ಮಡಿಕೇರಿ: ಸ್ಥಳೀಯ ಸಂಸ್ಥೆಗಳಿಂದ ರೆಡ್ಕ್ರಾಸ್ಗೆ ನಿಯಮ ಪ್ರಕಾರ ಸಲ್ಲಬೇಕಾದ ಅನುದಾನವನ್ನು ವಿಳಂಭರಹಿತವಾಗಿ ಪಡೆದುಕೊಂಡು ನಿಯಮಾನುಸಾರ ಜನರಿಗೆ ಪ್ರಯೋಜನಕಾರಿಯಾಗುವ ಯೋಜನೆಗಳಿಗೆ ಬಳಸಿಕೊಳ್ಳುವಂತೆ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಕರ್ನಾಟಕ ರಾಜ್ಯದ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಸೂಚಿಸಿದರು.

ನಗರದಲ್ಲಿನ ಕೊಡಗು ರೆಡ್ಕ್ರಾಸ್ ಭವನಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ರೆಡ್ಕ್ರಾಸ್ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿ ಜಿಲ್ಲೆಯಲ್ಲಿ ರೆಡ್ಕ್ರಾಸ್ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಅವರು, ಸ್ಥಳೀಯ ಸಂಸ್ಥೆಗಳಾದ ಜಿ.ಪಂ, ಗ್ರಾ.ಪಂ, ತಾ.ಪಂ, ನಗರ ಮತ್ತು ಪುರಸಭೆ, ಪ.ಪಂಗಳಿಂದ ಇನ್ನು ಕೂಡ ನಿಯಮಪ್ರಕಾರ ರೆಡ್ಕ್ರಾಸ್ಗೆ ಪಾವತಿಸಬೇಕಾದ ವಾರ್ಷಿಕ ಅನುದಾನ ಪಾವತಿಯಾಗದೇ ಇರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ವಿಳಂಭರಹಿತವಾಗಿ ಕಾರ್ಯಪ್ರವತ್ತವಾಗಿ ರೆಡ್ಕ್ರಾಸ್ಗೆ ಸಲ್ಲಿಸಬೇಕಾದ ಅನುದಾನವನ್ನು ನೀಡುವಂತೆ ಸೂಚಿಸಿದರು.
ರಾಜ್ಯದ ೩೧ ಜಿಲ್ಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಯೂತ್ ರೆಡ್ಕ್ರಾಸ್ನ್ನು ಪ್ರಬಲಗೊಳಿಸಲಾಗುತ್ತದೆ. ಕೊಡಗಿನಲ್ಲಿ ರಕ್ತದಾನ ಶಿಬಿರಗಳ ಹೆಚ್ಚಳದ ಜತೆಯಲ್ಲಿಯೇ ಖಾಸಗಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತನಿಧಿ ಕೇಂದ್ರವನ್ನೂ ಪ್ರಾರಂಭಿಸುವ ನಿಟ್ಟಿನಲ್ಲಿ ಚಿಂತನೆ ಹರಿಸಲಾಗುತ್ತದೆ ಎಂದು ಹೇಳಿದರು.
ರೆಡ್ ಕ್ರಾಸ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ರವೀಂದ್ರ ರೈ ಮಾತನಾಡಿ, ಜಿಲ್ಲಾ ರೆಡ್ ಕ್ರಾಸ್ನಲ್ಲಿ ಪ್ರಸ್ತುತ ೭೭೫ ಸದಸ್ಯರಿದ್ದಾರೆ. ಸದಸ್ಯತ್ವ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮಡಿಕೇರಿಯಲ್ಲಿ ಸ್ಥಾಪಿಸಲಾಗಿರುವ ರೆಡ್ಕ್ರಾಸ್ ಭವನದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ರಾಜ್ಯ ರೆಡ್ಕ್ರಾಸ್ ನಿಂದ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಕೋರಿದರು.
ಮೂರನೇ ಅವಧಿಗೆ ಕರ್ನಾಟಕ ರೆಡ್ ಕ್ರಾಸ್ನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಮೆ ಹೊಂದಿರುವ ಬಸ್ರೂರು ರಾಜೀವ್ ಶೆಟ್ಟಿ ದಂಪತಿಯನ್ನು ಕೊಡಗು ರೆಡ್ಕ್ರಾಸ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ರೆಡ್ಕ್ರಾಸ್ ಉಪಾಧ್ಯಕ್ಷ ಎಚ್.ಟಿ.ಅನಿಲ್, ಗೌರವ ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ನಿರ್ದೇಶಕರಾದ ಅಂಬೆಕಲ್ ಜೀವನ್ ಕುಶಾಲಪ್ಪ, ಮಧುಕರ್ ಇತರರು ಹಾಜರಿದ್ದರು.