ಮುಳಬಾಗಿಲಿನ ಎಂಸಿ ರಸ್ತೆಯ ಹುಣಸೆ ಮರದ ಬಳಿ ಶಿಸ್ತಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದರಿಂದ ರಸ್ತೆ ವಿಶಾಲವಾಗಿರುವುದು.
ಮುಳಬಾಗಿಲಿನಲ್ಲಿ ಬಗೆಹರಿದ ವಾಹನದಟ್ಟಣೆ,ನಿಯಮ ಪಾಲಿಸದವರಿಗೆ ದಂಡಾಸ್ತ್ರ
ಎ.ಅಪ್ಪಾಜಿ ಗೌಡ ಮುಳಬಾಗಿಲು
ನಗರದಲ್ಲಿ ಹಲವು ವರ್ಷಗಳಿಂದ ತೊಂದರೆಯಾಗಿ ಕಾಡುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಪೊಲೀಸರು ಮುಕ್ತಿ ನೀಡಿದ್ದಾರೆ. ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಚಾರಿ ನಿಯಮಗಳೇ ಇಲ್ಲವಾಗಿದ್ದು, ರಸ್ತೆ ಬದಿ ವ್ಯಾಪಾರಿಗಳು ಪುಟ್ಪಾತ್ನಲ್ಲಿಯೇ ಹಣ್ಣು, ತರಕಾರಿ, ವೀಳ್ಯದೆಲೆ, ಹೂವು ಮಾರಾಟ ಮಾಡುತ್ತಿದ್ದರು. ಇದರಿಂದ ಪಾದಚಾರಿಗಳು ನಡೆದಾಡಲು ಮುಖ್ಯ ರಸ್ತೆಯನ್ನೇ ಆಶ್ರಯಿಸಬೇಕಾಗಿತ್ತು. ಅಂಗಡಿಗಳ ಮುಂದೆ ಸಾರ್ವಜನಿಕರು ವಾಹನ ನಿಲುಗಡೆ ಮಾಡುತ್ತಿದ್ದರಿಂದ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಎದುರಾಗಿತ್ತು.
ಅಂಬೇಡ್ಕರ್ ವೃತ್ತದಿಂದ ತಾಲೂಕು ಸೊಸೈಟಿ ವೃತ್ತದವರೆಗೆ, ಬೆಸ್ಕಾಂ ಮುಂಭಾಗದಿಂದ ಬಸ್ ನಿಲ್ದಾಣ ರಸ್ತೆ ಸೇರಿ ತಾಲೂಕು ಕಚೇರಿವರೆಗೂ ರಸ್ತೆಯಲ್ಲಿಯೇ ಪಾದಚಾರಿಗಳು ಓಡಾಡುತ್ತಿದ್ದರಿಂದ ಹಾಗೂ ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿದ್ದರಿಂದ ಸುಗಮ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗಿತ್ತು.ಈ ಹಿನ್ನೆಲೆಯಲ್ಲಿ ಶಾಸಕ ಸಮೃದ್ಧಿ ವಿ.ಮಂಜುನಾಥ್ ಸೇರಿ ರಾಜಕೀಯ ನಾಯಕರ ಬೆಂಬಲ, ಎಸ್ಪಿ ಬಿ.ನಿಖಿಲ್, ಎಎಸ್ಪಿಗಳಾದ ರವಿಶಂಕರ್, ಜಗದೀಶ್, ಉಪ ವಿಭಾಗದ ಡಿವೈಎಸ್ ಪಿ.ಡಿ.ಸಿ. ನಂದಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎನ್.ರಾಜಣ್ಣ ಹಾಗೂ ಸಿಬ್ಬಂದಿ ಪುಟ್ಪಾತ್ ಒತ್ತುವರಿ ತೆರವು ಹಾಗೂ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಬ್ರೇಕ್ ಹಾಕಿದ್ದು, ಮುಳಬಾಗಿಲಿನ ಸುಗಮ ಸಂಚಾರಕ್ಕೆ ಮುನ್ನುಡಿಯಾಗಿದೆ.
ಪುಟ್ಪಾತ್ ಒತ್ತುವರಿ ತೆರವು: ಇತ್ತೀಚೆಗೆ ತಾಲೂಕು ಸೊಸೈಟಿ ಮುಂಭಾಗದ ವೃತ್ತದಲ್ಲಿ ಹಾಗೂ ಹೂವಿನನ ಮಾರುಕಟ್ಟೆ ವೃತ್ತದಲ್ಲಿ ನಗರಸಭೆಯಿಂದ ಸಿಗ್ನಲ್ ಲೈಟ್ ಅಳವಡಿಸಿದ್ದು, ಕಾರ್ಯಗತಕ್ಕೆ ಬರುವ ಮುನ್ನವೇ ಪೊಲೀಸರು ಫುಟ್ಪಾತ್ ಅಂಗಡಿಗಳ ಒತ್ತುವರಿ, ಬದಿಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸ್ ಠಾಣೆಗೆ ಹೊತ್ತೊಯುತ್ತಿದ್ದಂತೆ ರಸ್ತೆಗಳು ವಿಶಾಲವಾಗಿ ಗೋಚರಿಸುತ್ತಿವೆ. ಪೊಲೀಸರ ಕಾರ್ಯವೈಖರಿಗೆ ಎಚ್ಚೆತ್ತುಕೊಂಡ ಜನತೆಗೀಗ ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಿದೆ.
ತಾಲೂಕು ಕೇಂದ್ರದಲ್ಲಿ ಸಂಚಾರ ಸುಗಮವಾಗಿರಬೇಕು. ಶಾಸಕರು ಸೇರಿ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿವಹಿಸಿ ವ್ಯಾಪಾರಿಗಳಿಗೂ ತೊಂದರೆಯಾಗದಂತೆ ಎಪಿಎಂಸಿ ಆವರಣದಲ್ಲಿ ಎಲ್ಲ ಪುಟ್ಪಾತ್ ಅಂಗಡಿ ಮಾಲೀಕರಿಗೆ ಅವಕಾಶ ಮಾಡಿಕೊಡಬೇಕು. ಗ್ರಾಹಕರು ವಾಹನ ನಿಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಕೊಟ್ಟರೆ ಎಲ್ಲರಿಗೂ ಅನುಕೂಲವಾಗುತ್ತದೆ.
ಎಂ.ಸಿ.ನೀಲಕಂಠೇಗೌಡ ಅವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಹಲವು ವರ್ಷಗಳಿಂದ ಸಂಚಾರಿ ನಿಯಮಗಳ ಪಾಲನೆ ಇರಲಿಲ್ಲ. ಅಂಗಡಿ ಮುಂಗಟ್ಟುಗಳ ಮುಂದೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಜನರು ವ್ಯಾಪಾರ ಮಾಡುತ್ತಾರೆ. ಈಗ ಏಕಾಏಕಿ ಪುಟ್ಪಾತ್ ಅಂಗಡಿ ತೆರವುಗೊಳಿಸಿದ್ದರಿಂದ ತೊಂದರೆ ಉಂಟಾಗಿದೆ. ತೆರವಿಗೆ ಮಾಹಿತಿ ಜತೆಗೆ ಸಮಯಾವಕಾಶ ನೀಡಬೇಕಿತ್ತು.
ಮಹ್ಮದ್ ಆಸಿಫ್ ಅಂಗಡಿ ಮಾಲೀಕ