ರಾಘವೇಂದ್ರ ಪೈ ಗಂಗೊಳ್ಳಿ

ಉಡುಪಿ ಜಿಲ್ಲೆಯ ಗಂಗೊಳ್ಳಿ ಮೀನುಗಾರಿಕೆ ಬಂದರು ಪ್ರದೇಶಕ್ಕೆ ಯಾವುದೇ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಆತಂಕ ಸೃಷ್ಟಿಸುತ್ತಿದ್ದು, ಹಲವು ಸಮಸ್ಯೆಗೆ ಕಾರಣವಾಗುತ್ತಿದೆ.
ಜಿಲ್ಲೆಯ ದೊಡ್ಡ ಮತ್ತು ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಬಂದರು ಕಳೆದ ಕೆಲವು ವರ್ಷಗಳಿಂದ ಜೆಟ್ಟಿ ವಿಚಾರದಲ್ಲಿ ಬಹಳಷ್ಟು ಸುದ್ದಿಯಲ್ಲಿದೆ. ಪ್ರತಿನಿತ್ಯ ಸಾವಿರಾರು ಮಂದಿ ಮೀನುಗಾರರು, ಮೀನು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಗಂಗೊಳ್ಳಿ ಬಂದರಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಬಂದರಿಗೆ ಈವರೆಗೆ ಯಾವುದೇ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿಲ್ಲ.
ಭದ್ರತಾ ಸಿಬ್ಬಂದಿ ಇಲ್ಲ: ಬಂದರು ಪ್ರವೇಶ ದ್ವಾರದಲ್ಲಿ ಗೇಟ್ ಅಳವಡಿಸಲಾಗಿದ್ದು, ಬಂದರು ನಿರ್ವಹಣೆ ಸಿಬ್ಬಂದಿ ಬಿಟ್ಟರೆ ಇಲಾಖೆಯಿಂದ ಭದ್ರತಾ ಸಿಬ್ಬಂದಿ ನಿಯೋಜನೆಯಾಗಿಲ್ಲ. ಬಂದರು ಸುತ್ತ ಇನ್ನೂ ಆವರಣ ಗೋಡೆ ನಿರ್ವಾಣವಾಗಿಲ್ಲ. ಹೀಗಾಗಿ ಯಾರೂ ಎಲ್ಲಿಂದ ಬೇಕಾದರೂ ಬಂದರು ಪ್ರವೇಶಿಸಬಹುದು. ಬಂದರಿನ ಚಲನವಲನಗಳ ಬಗ್ಗೆ ನಿಗಾ ಇರಿಸಲು ಗೇಟ್ ನಿರ್ವಹಣೆ ವಾಡುವ ಏಜನ್ಸಿಯವರು ಸಿಸಿ ಕ್ಯಾಮರಾ ಅಳವಡಿಸಿರುವುದು ಬಿಟ್ಟರೆ ಇಲಾಖೆ ಮೂಲಕ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ಬಂದರಿಗೆ ಪ್ರವೇಶಿಸುವ ಮತ್ತು ಹೊರ ಹೋಗುವ ವಾಹನಗಳ ಮತ್ತು ಜನರ ಚಲನವಲನಗಳ ಬಗ್ಗೆ ನಿಗಾ ಇರಿಸಲು ಸಾಧ್ಯವಾಗುತ್ತಿಲ್ಲ.
ರಾತ್ರಿ ಹೊತ್ತು ಮೀನಿಗೆ ಗಾಳ ಹಾಕಲು ಅನೇಕರು ಬಂದರಿಗೆ ಬರುತ್ತಾರೆ. ಬಂದರಿನ ಸೀವಾಕ್ ಪ್ರದೇಶದಲ್ಲಿ ಮದ್ಯಪಾನ ಮಾಡಿ ಹರಟೆ ಹೊಡೆಯುತ್ತಾ ಇರುತ್ತಾರೆ. ಬಂದರಿನ ಭದ್ರತಾ ವೈಲ್ಯಗಳ ಲಾಭ ವಾಡಿಕೊಂಡಿರುವ ಕೆಲವರು ಬಂದರಿನಲ್ಲಿ ಕಳ್ಳತನದಂತಹ ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದಿದ್ದರೆ ಮುಂದೆ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.
ಪ್ರವೇಶ ದ್ವಾರದಲ್ಲಿರುವ ಗೇಟಿನಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ, ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಆವರಣ ಗೋಡೆ ನಿರ್ವಾಣ ಸಹಿತ ಇನ್ನಿತರ ಕೆಲವು ಕಾಮಗಾರಿಗಳಿಗೆ ಪಿಎಂಎಂಎಸ್ವೈ ಯೋಜನೆಯಡಿ ಅನುದಾನ ಮೀಸಲಿಡಲಾಗಿದೆ. ಸಿಆರ್ಜಡ್ ಕ್ಲಿಯರೆನ್ಸ್ ಸಿಕ್ಕಿದ ಬಳಿಕ ಕೆಲಸ ಪ್ರಾರಂಭವಾಗಲಿದೆ.
-ಸಂಜೀವ ಅರಕೇರಿ, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಗಂಗೊಳ್ಳಿ
https://www.vijayavani.net/hebri-gramam-model-in-surya-ghar-implementation