ಗಂಗಾವತಿ: ಅನಧಿಕೃತ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಸ್ಎಫ್ಐ ತಾಲೂಕು ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ರಾಜ್ಯದಲ್ಲಿ 1,316 ಖಾಸಗಿ ಶಾಲೆಗಳಿರುವ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕಿನಲ್ಲೂ ಅನಧಿಕೃತ ಶಾಲೆಗಳ ಹಾವಳಿ ಹೆಚ್ಚಾಗಿದೆ. ಪರೀಕ್ಷೆ ಆರಂಭವಾಗುವ ಮುನ್ನವೇ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಗಮನಕ್ಕಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಮೂಲ ಸೌಕರ್ಯ ಕೊರತೆ ಹಾಗೂ ಕನ್ನಡ ಮಾಧ್ಯಮದ ಪರವಾನಗಿ ಪಡೆದು ಸಿಬಿಎಸ್ಇ, ಐಸಿಎಸ್ಸಿ ಪಠ್ಯಕ್ರಮದ ನೆಪದಲ್ಲಿ ಪಾಲಕರನ್ನು ಶೋಷಿಸಲಾಗುತ್ತಿದೆ. 1983ರ ಶಿಕ್ಷಣ ಕಾಯ್ದೆಯನ್ನು ಬಹುತೇಕ ಶಾಲೆಗಳು ಉಲ್ಲಂಸುತ್ತಿವೆ. ವಿದ್ಯಾರ್ಥಿ, ಪಾಲಕರು ಹಾಗೂ ವಿವಿಧ ಸಂಘಟನೆಗಳನ್ನೊಳಗೊಂಡ ಖಾಸಗಿ ಶಾಲೆಗಳ ನಿಯಂತ್ರಣ ಸಮಿತಿ ಮತ್ತೆ ರಚಿಸಬೇಕು. ಅನಧಿಕೃತ ಶಾಲೆಗಳ ಪಟ್ಟಿ ಬಿಡುಗೆಗೊಳಿಸದಿದ್ದರೆ ಪಾಲಕರೊಂದಿಗೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಬಿಇಒ ಸೋಮಶೇಖರಗೌಡ ತಿಪ್ಪನಾಳ್ಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಕೀರೇಶ, ಶಂಕರ, ಅಮರೇಶ, ದರ್ಶನ, ದುರುಗೇಶ, ದುರುಗಪ್ಪ. ಭೀಮೇಶ, ಸಮೀರ್, ರುದ್ರಗೌಡ, ಮಂಜುನಾಥ, ಶಿವಮೂರ್ತಿ ಇತರರಿದ್ದರು.
ತ್ರಿವಳಿ ತಾಲೂಕಿನಲ್ಲಿ ಎರಡು ಶಾಲೆಗಳು ಮುಚ್ಚಲಾಗಿದ್ದು, 10 ಶಾಲೆಗಳು ಇನ್ನೂ ಪರವಾನಗಿ ನವೀಕರಿಸಿಕೊಂಡಿಲ್ಲ. ಈಗಾಗಲೇ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಸಿಆರ್ಪಿ ನೇತೃತ್ವದ ತಂಡ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದೆ.
| ಸೋಮಶೇಖಗೌಡ ತಿಪ್ಪನಾಳ್, ಬಿಇಒ, ಗಂಗಾವತಿ