ಗಂಗಾವತಿ: ಬೇಸಿಗೆ ಅವಧಿಯ ಕುಡಿವ ನೀರಿನ ಸಮಸ್ಯೆ ಸಮರ್ಥವಾಗಿ ಪರಿಹರಿಸಬೇಕಿದ್ದು, ನಿರ್ಲಕ್ಷಿಸುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಾರಸು ಮಾಡಲಾಗುವುದು ಎಂದು ತಹಸೀಲ್ದಾರ್ ಯು.ನಾಗರಾಜ್ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಏಪ್ರಿಲ್, ಮೇ ತಿಂಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಬಹುದಾಗಿದ್ದು, ಸಮಿತಿ ಸದಸ್ಯರು ನಿರಂತರ ಸಭೆ ಸೇರುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಪ್ರತಿ ಮಂಗಳವಾರ ಗ್ರಾಪಂ ಮಟ್ಟದಲ್ಲಿ ಟಾಸ್ಕೆೆರ್ಸ್ ಸಮಿತಿ ಸಭೆ ಕಡ್ಡಾಯವಾಗಿದ್ದು, ಕುಡಿವ ನೀರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಮತ್ತು ಕ್ರೀಯಾಯೋಜನೆ ಅನುಮೋದನೆ ಪಡೆಯಬೇಕು. ಸಮಸ್ಯಾತ್ಮಕ ಗ್ರಾಮಗಳತ್ತ ಎಚ್ಚರ ವಹಿಸಬೇಕಿದ್ದು, ಪರ್ಯಾಯ ಯೋಜನೆಗೆ ಬೇಕಾದ ಅನುದಾನದ ಬಗ್ಗೆ ತಾಪಂ ಮೂಲಕ ತಹಸಿಲ್ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಗ್ರಾಪಂ, ಕಂದಾಯ, ಗ್ರಾ.ಕು.ನೈ. ಇಲಾಖೆ ಸಿಬ್ಬಂದಿ ಸಮನ್ವಯತೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕಿದ್ದು, ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾತನಾಡಿ, ಖಾಸಗಿ ಬೋರ್ವೆಲ್ ಮೂಲಕ ನೀರು ಪಡೆಯಬೇಕಾದರೆ ಇಲಾಖೆ ನಿಯಮಾವಳಿಯಂತೆ ಒಪ್ಪಂದ ಪತ್ರದ ಮೂಲಕವೇ ಪಡೆಯಬೇಕು. ಬಾಡಿಗೆ ಶುಲ್ಕವನ್ನು ಟಾಸ್ಕ್ಪೋರ್ಸ್ ಸಮಿತಿಯಿಂದ ಬರದಿದ್ದರೆ 15ನೇ ಹಣಕಾಸು ಯೋಜನೆಯಡಿ ಬಳಸಿಕೊಳ್ಳಬಹುದಾಗಿದೆ. ನೀರಿನ ಕಾಮಗಾರಿ ಬಗ್ಗೆ ಯೋಜನೆ ರೂಪಿಸಿದರೆ ತಾಪಂಗೆ ಒಂದು ಪ್ರತಿ ಸಲ್ಲಿಸಬೇಕಿದೆ. ಕುಡಿವ ನೀರಿನ ವಿಚಾರದಲ್ಲಿ ನಿರ್ಲಕ್ಷೃ ವಹಿಸುವಂತಿಲ್ಲ. ಜಾನುವಾರುಗಳಿಗೆ ಬೇಕಿರುವ ನೀರು ಮತ್ತು ಮೇವು ಪೂರೈಕೆಗೆ ಪಶು ಸಂಗೋಪನೆ ಇಲಾಖೆ ಗ್ರಾಪಂ ಸಿಬ್ಬಂದಿಯೊಂದಿಗೆ ಚರ್ಚಿಸಬೇಕೆಂದರು.
ಸಮಸ್ಯಾತ್ಮಕ ಗ್ರಾಮ: ತಾಲೂಕಿನಾದ್ಯಂತ ಕುಡಿವ ನೀರು ನಿರ್ವಹಣೆಗೆ ಅನುದಾನ ಅಗತ್ಯವಿದ್ದು, ಕೆಲವೆಡೆ ಪೈಪ್ಲೈನ್ ನಿರ್ವಹಿಸಬೇಕಿದೆ. ಈಗಾಗಲೇ 44 ಖಾಸಗಿ ಬೋರ್ವೆಲ್ಗಳಿಂದ ನೀರು ಪಡೆಯಲಾಗುತ್ತಿದೆ. ಹಳೇಬೆಣಕಲ್, ಮುಕ್ಕಂಪಿ, ಲಿಂಗದಹಳ್ಳಿ, ರಾಂಪುರ, ಹೊಸಳ್ಳಿ, ವಿನೋಬನಗರ, ಕೃಷ್ಣದೇವರಾಯ ನಗರ, ಹೊಸ್ಕೇರಾ ಗ್ರಾಮಗಳಲ್ಲಿ ಸಮಸ್ಯೆಯಿದ್ದು ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ. ಬಹುತೇಕ ಆರ್ಒ ಪ್ಲಾಂಟ್ಗಳು ಹಾಳಾಗಿದ್ದು, ದುರಸ್ತಿ ಕೈಗೊಳ್ಳಬೇಕಿದೆ ಎಂದು ವಿವಿಧ ಗ್ರಾಪಂ ಪಿಡಿಒಗಳು ವರದಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸರ್ಕಾರಿ ಭೂಮಿ ಒದಗಿಸುವಂತೆ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಯಿತು. ಕೇಂದ್ರ ಸರ್ಕಾರ ಮನೆಮನೆಗೆ ಗಂಗೆ ಪರಿಕಲ್ಪನೆಯ ಜೆಜೆಎಂ ಯೋಜನೆ ಸಂಪೂರ್ಣ ವಿಲವಾಗಿದ್ದು, ಅದರಿಂದ ಹಳೇ ಪೈಪ್ಲೈನ್ಗಳು ಹಾಳಾಗಿವೆ. ಗುತ್ತಿಗೆದಾರರಿಗೆ ನಿರ್ವಹಣೆ ಅವಧಿಯಿದ್ದರೂ, ದುರಸ್ತಿಗೆ ಸ್ಪಂದಿಸುತ್ತಿಲ್ಲ ಎಂದು ಪಿಡಿಒಗಳು ಅಸಮಾಧನ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪತಹಸೀಲ್ದಾರ್ ಮಹೆಬೂಬ್ಅಲಿ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ದೇವಣ್ಣ ಕಟ್ಟಿ, ಆರ್ಐಗಳಾದ ಹಾಲೇಶ ಗುಂಡಿ, ಮಹೇಶ ದಲಾಲ್, ಬಶೀರುದ್ದೀನ್, ಪಶು ಸಂಗೋಪನೆ ಇಲಾಖೆ ಎಇಇ ಡಾ.ಜಾಕೀರ್ ಹುಸೇನ್ ಇತರರಿದ್ದರು.
ತಾಲೂಕಿನಲ್ಲಿರುವ ಬಹುತೇಕ ಆರ್ಒ ಪ್ಲಾಂಟ್ಗಳು ದನ ಕಟ್ಟುವ ಕೊಟ್ಟಿಗೆಯಾಗಿದ್ದು, ಅದರಲ್ಲಿರುವ ಸಲಕರಣೆಗಳು ಹಾಳಾಗುತ್ತಿವೆ. ಎರಡು ದಿನಗಳೊಳಗೆ ಪ್ಲಾಂಟ್ಗಳ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಬೇಕಿದ್ದು, ಅಗತ್ಯ ಬಿದ್ದಲ್ಲಿ ಪ್ಲಾಂಟ್ಗಳನ್ನು ಗ್ರಾಪಂ ಸುಪರ್ದಿಗೆ ನೀಡಿ.
| ಯು.ನಾಗರಾಜ್ ತಹಸೀಲ್ದಾರ್, ಗಂಗಾವತಿ