ಗಂಗಾವತಿ: ಕಲಿಕೆ ಜತೆಗೆ ಸಾಮಾಜಿಕ ಸೇವೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯರಾಗಬೇಕಿದ್ದು, ದುರ್ಬಲರ ಸೇವೆಯತ್ತ ಗಮನಹರಿಸಿ ಎಂದು ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.

ನಗರದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸೇವಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಮನುಷ್ಯ ಸ್ವಾರ್ಥಕ್ಕಾಗಿ ನಿಸರ್ಗದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಮತ್ತು ಸಾಮಾಜಿಕ ಸಮಸ್ಯೆ ಸೃಷ್ಟಿಯಾಗುತ್ತಿವೆ. ಪ್ರಕೃತಿ ರಕ್ಷಣೆ ಜತೆಗೆ ಅಸಹಾಯಕರಿಗೆ ನೆರವಾಗುವ ಯೋಜನೆಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಹಾಕಿಕೊಳ್ಳಬೇಕಿದೆ ಎಂದರು.
ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್ ಮಾತನಾಡಿ, ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಶ್ರೇಷ್ಠ ಎಂದರು. ಶಿಬಿರದಲ್ಲಿ ಹಮ್ಮಿಕೊಂಡಿದ್ದ ಸೇವಾ ಕಾರ್ಯಗಳು ಕುರಿತು ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಮಾಹಿತಿ ನೀಡಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಸುರೇಶಗೌಡ, ಡಾ.ವಾಣಿಶ್ರೀ ಪಾಟೀಲ್ ಇತರರಿದ್ದರು.