ಶ್ರೀ ಘಾಟಿ ಕ್ಷೇತ್ರದಲ್ಲಿ ಮಾಂಗಲ್ಯ ಭಾಗ್ಯ

blank

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯಲ್ಲಿನ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ‘ಮಾಂಗಲ್ಯ ಭಾಗ್ಯ’ ಯೋಜನೆಯಡಿ ಸರಳ ಸಾಮೂಹಿಕ ವಿವಾಹಕ್ಕೆ ಸಿದ್ದತೆ ನಡೆದಿದೆ.
ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಪ್ರಾಧಿಕಾರದ ವತಿಯಿಂದ ಮೇ 7ರಂದು ವಿವಾಹ ಕಾರ್ಯಕ್ರಮ ನಡೆಯಲಿದ್ದು, ಆಡಳಿತ ಮಂಡಳಿ ವತಿಯಿಂದ ವಿವಾಹ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿದ್ದತೆಗಳು ನಡೆದಿವೆ. 2020ರಲ್ಲಿ ಶ್ರೀ ಕ್ಷೇತ್ರದಲ್ಲಿ ಆರಂಭವಾದ ಸರಳ ವಿವಾಹ ಕಾರ್ಯಕ್ರಮ 5ನೇ ವರ್ಷಕ್ಕೆ ಕಾಲಿಟ್ಟಿದ್ದು, 5 ನೇ ವಾರ್ಷಿಕೋತ್ಸವ ಪ್ರಯುಕ್ತ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಲು ಘಾಟಿ ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳಲಿದ್ದು, ಚುಂಚನಗಿರಿಯ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಡಿಸಿಎಂ ಡಿ.ಕೆ.ಶಿವಕುಮಾರ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪಾಲ್ಗೊಳ್ಳಲಿದ್ದಾರೆ.

blank

ದಾಖಲೆ ಜೋಡಿ: ರಾಜ್ಯದ ವಿವಿಧ ದೇಗುಲಗಳಲ್ಲಿ ನಡೆಯುವ ಸರಳ ಸಾಮೂಹಿಕ ವಿವಾಹಗಳ ಪೈಕಿ ಅತೀ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ದೇಗುಲ ಆಡಳಿತ ಮಂಡಳಿ ಹೇಳಿದೆ. ಕಳೆದ ವರ್ಷ 50 ಜೋಡಿ ಹಸೆಮಣೆ ಏರಿತ್ತು ಈ ಬಾರಿ 67 ಜೋಡಿಗಳ ನವದಾಂಪತ್ಯ ಜೀವನಕ್ಕೆ ಕಾಲಿಡಲಿವೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮಂಡ್ಯ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಜೋಡಿಗಳು ವಿವಾಹಕ್ಕೆ ನೋಂದಾಯಿಸಿಕೊಂಡಿದ್ದಾರೆ.

70 ಸಾವಿರ ಜನ ಸೇರುವ ನಿರೀಕ್ಷೆ:ಈ ಬಾರಿ 67 ಜೋಡಿಗಳ ವಿವಾಹ ಕಾರ್ಯಕ್ರಮ ನಡೆಯುವುದರಿಂದ ಮದುಮಕ್ಕಳ ಜತೆಗೆ ಬರುವ ಪಾಲಕರು, ಸಂಬಂಧಿಕರು ಜತೆಗೆ ಡಿಸಿಎಂ, ಸಚಿವರ ಆಪ್ತರು ಸೇರಿ ಸುಮಾರು 70 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಬಲಭಾಗದಲ್ಲಿ ವಿಶೇಷವಾಗಿ ಸ್ಥಳ ನಿಯೋಜನೆ ಮಾಡಿ ಮಾಂಗಲ್ಯಧಾರಣೆ ಕಾರ್ಯಕ್ರಮ ನೆರವೇರಿಸಲು ಆಡಳಿತ ಮಂಡಳಿ ರೂಪುರೇಷೆ ಸಿದ್ದಪಡಿಸುತ್ತಿದೆ.

ಹೋಳಿಗೆ ಊಟ: ಸರಳ ಸಾಮೂಹಿಕ ವಿವಾಹಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವ ಜನರಿಗಾಗಿ ಮದುವೆ ಊಟ ಸಿದ್ದಪಡಿಸಲಾಗುವುದು ಮುಖ್ಯವಾಗಿ ಹೋಳಿಗೆ ಊಟ ಬಡಿಸುವ ಚಿಂತನೆ ಇದೆ. ಈ ಬಾರಿ ಹೆಚ್ಚು ಜನರು ಜಮಾವಣೆಯಾಗುವುದರಿಂದ ಅಚ್ಚುಕಟ್ಟಾಗಿ ಭೋಜನ ಕಾರ್ಯಕ್ರಮ ನಡೆಸುವ ಸಂಬಂಧ ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ.
ಒಂದು ಜೋಡಿಗೆ 63 ಸಾವಿರ ರೂ.ಖರ್ಚು:
ವರನಿಗೆ 5 ಸಾವಿರ ನಗದು, ವಧುವಿಗೆ 10 ಸಾವಿರ ರೂ.ನಗದು ಕೊಡಲಾಗುತ್ತದೆ. ವಿವಾಹ ಕಾರ್ಯಕ್ರಮದ ಬಟ್ಟೆ ಮತ್ತಿತರ ವಸ್ತುಗಳಿಗೆ ಬಳಕೆ ಮಾಡಬಹುದು ಹಾಗೆಯೇ 48 ಸಾವಿರ ರೂ.ಮೌಲ್ಯದ ಬಂಗಾರದ ತಾಳಿ ಹಾಗೂ ಗುಂಡುಗಳನ್ನು ನೀಡಲಾಗುತ್ತದೆ. ಇತರೆ ಖರ್ಚು ಸೇರಿ ಜೋಡಿಯೊಂದಕ್ಕೆ 63 ಸಾವಿ ರೂ.ಖರ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಂದಣಿಗೆ ಕಟ್ಟುನಿಟ್ಟು: ಮಾಂಗಲ್ಯ ಭಾಗ್ಯ ಸರಳ ವಿವಾಹ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಕೆಲವೊಂದು ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ವಿವಾಹ ಕಾರ್ಯಕ್ರಮದಲ್ಲಿ ಕಾನೂನಿನ ಪ್ರಕಾರ ವಧುವಿಗೆ 18 ಹಾಗೂ ವರನಿಗೆ 21 ವರ್ಷ ವಯಸ್ಸಾಗಿರಬೇಕು, ಇದನ್ನು ಜನನ ಪ್ರಮಾಣ ಪತ್ರದೊಂದಿಗೆ ದೃಢೀಕರಿಸಬೇಕು. ಜತೆಗೆ ಜೋಡಿಗಳಿಗೆ ಇದೇ ಮೊದಲ ಮದುವೆ ಎಂಬುದನ್ನು ದೃಢೀಕರಿಸಲು ಆಯಾ ಪಂಚಾಯಿತಿ ಪಿಡಿಒ, ನಗರಸಭೆ ಅಥವಾ ಪುರಸಭೆಯಿಂದ ದೃಢೀಕರಣ ಪತ್ರ ನೀಡಬೇಕು, ಪಾಲಕರ ಒಪ್ಪಿಗೆ ಕಡ್ಡಾಯ. ಒಂದು ವೇಳೆ ಪಾಲಕರು ನಿಧನರಾಗಿದ್ದರೆ, ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಆಧಾರ್‌ಕಾರ್ಡ್, ರೇಷನ್ ಕಾರ್ಡ್ ಮತ್ತಿತರ ದೃಢೀಕರಣ ಪತ್ರಗಳನ್ನು ಪರಿಶೀಲಿಸಿದ ಬಳಿಕಷ್ಟೇ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತೀ ಹೆಚ್ಚು ಅಂದರೆ 67 ಜೋಡಿಗಳು ಮಾಂಗಲ್ಯಭಾಗ್ಯ ಸರಳ ಸಾಮೂಹಿಕ ಕಾರ್ಯಕ್ರಮದಲ್ಲಿ ದಾಂಪತ್ಯಕ್ಕೆ ಕಾಲಿಡಲಿವೆ, ಈ ಬಾರಿ ಹೆಚ್ಚು ಜನರು ಸೇರುವ ಹಿನ್ನೆಲೆಯಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೋಡಿಗಳ ಪೂರ್ವಾಪರ, ದೃಢೀಕರಣ ಪತ್ರಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆದಿದೆ. ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ನಾರಾಯಣಸ್ವಾಮಿ, ಘಾಟಿ ಇಒ
——-
ಮೇ 7 ವೈಶಾಕ ಮಾಸದಂದು ವಿವಾಹ ಕಾರ್ಯಕ್ರಮಕ್ಕೆ ಪ್ರಶಸ್ತವಾಗಿದ್ದು 67 ಜೋಡಿಗಳು ಹಸೆಮಣೆ ಏರಲಿವೆ. ಶ್ರೀ ನಿರ್ಮಲಾನಂದನಾಥ ಘಾಟಿ ದೇಗುಲದ ಐವರು ಅರ್ಚಕರು ಹಾಗೂ ಪರಿಚಾರಕರ ಸಮ್ಮುಖದಲ್ಲಿ ಶಾಸ್ತ್ರೋಸ್ತವಾಗಿ ವಿವಾಹ ಕಾರ್ಯಕ್ರಮ ನೆರವೇರಲಿದೆ. ರಾಜ್ಯದ ವಿವಿಧ ದೇಗುಲಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಪೈಕಿ ಈ ಬಾರಿ ಅತೀ ಹೆಚ್ಚು ಜೋಡಿಗಳು ಘಾಟಿ ಕ್ಷೇತ್ರದಲ್ಲಿ ದಾಂಪತ್ಯಜೀವನಕ್ಕೆ ಕಾಲಿಡಲಿವೆ ಎಂಬುದು ವಿಶೇಷ.
ನಾಗೇಂದ್ರಸ್ವಾಮಿ, ಪ್ರಧಾನ ಅರ್ಚಕರು ಘಾಟಿ ಕ್ಷೇತ್ರ

TAGGED:
Share This Article

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…