ಪರಿಸರ ಭದ್ರತಾ ಪ್ರತಿಷ್ಠಾನದ ಮುಖ್ಯಸ್ಥ ಶ್ರೀರಂಗ ಹೆಗಡೆ ಅಭಿಮತ
ಶಿಡ್ಲಘಟ್ಟ: ಸಾಮೂಹಿಕ ಆಸ್ತಿಗಳ ಸಂರಕ್ಷಣೆಯಿಂದ ಮಾತ್ರ ಸಮೃದ್ಧ ಜೀವನ ಸಾಧ್ಯ ಎಂದು ಪರಿಸರ ಭದ್ರತಾ ಪ್ರತಿಷ್ಠಾನದ ಜಿಲ್ಲಾ ಮುಖ್ಯಸ್ಥ ಶ್ರೀರಂಗ ಹೆಗಡೆ ಅಭಿಪ್ರಾಯಪಟ್ಟರು.
ತಾಲೂಕಿನ ಬೆಳ್ಳೂಟಿ ಗೇಟ್ ಬಳಿಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಆಸ್ತಿಗಳ ಸಮುದಾಯ ಉಸ್ತುವಾರಿ ಸಮ್ಮೇಳನದಲ್ಲಿ ಮಾತನಾಡಿದರು.
ವಿಶ್ವದಾದ್ಯಂತ, ಡಿ.4ರಿಂದ 10ರವರೆಗೆ ವಿಶ್ವ ಸಾಮೂಹಿಕ ಆಸ್ತಿಗಳ ಸಪ್ತಾಹ ನಡೆಸುತ್ತಿದ್ದು, ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಕೆರೆ, ಕುಂಟೆ, ರಾಜಕಾಲುವೆ, ಪೋಷಕ ಕಾಲುವೆ, ಅರಣ್ಯ, ಸ್ಮಶಾನ ಮುಂತಾದವುಗಳನ್ನು ಸಂರಕ್ಷಣೆ ಮಾಡಿ, ಅಭಿವೃದ್ಧಿ ಪಡಿಸುವುದು ಹಾಗೂ ನಿರ್ವಹಣೆಯ ಕುರಿತು ತಿಳಿವಳಿಕೆ ಮೂಡಿಸುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ ಎಂದರು.
ಸಾಮೂಹಿಕ ಆಸ್ತಿಗಳನ್ನು ಉಳಿಸಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳನ್ನು ರಚನೆ ಮಾಡಲಾಗಿದೆ. ಗ್ರಾಮೀಣ ಭಾಗದ ಸಾಮೂಹಿಕ ಆಸ್ತಿಗಳನ್ನು ಗ್ರಾಮ ಪಂಚಾಯಿತಿಯ ಆಸ್ತಿ ವಹಿಯಲ್ಲಿ ನಮೂದಿಸಿ ಈ ಆಸ್ತಿಗಳನ್ನು ಉಳಿಸಿ ಅಭಿವೃದ್ದಿ ಪಡಿಸುವ ಗುರುತರವಾದ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ ಎಂದರು.
ಸಮುದಾಯವನ್ನು ಸಂಘಟಿಸಿ, ಹಲವಾರು ಹೋರಾಟಗಳ ಮೂಲಕ ಸಮೂಹಿಕ ಆಸ್ತಿಗಳನ್ನು ಉಳಿಸಿ, ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಲ್ಲರಿಗೂ ಮಾದರಿಯಾಗಿರುವ ಕುಮದಲಗುರ್ಕಿ ಗ್ರಾಮದ ಕೆ.ಎಂ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ಬೆಳ್ಳೂಟಿ ಶಾಲಾ ಮಕ್ಕಳು ಪರಿಸರ ಗೀತೆ ಹಾಡಿ ಮತ್ತು ನೃತ್ಯ ಪ್ರದರ್ಶಿಸಿದರು. ಆನೂರು ಗ್ರಾಮ ಪಂಚಾಯಿತಿ ಸದಸ್ಯೆ ವರಲಕ್ಷ್ಮಿ ಸಂತೋಷ್ ಅವರು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಪರಿಕರಗಳನ್ನು ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕುಂದಲಗುರ್ಕಿ ಗ್ರಾ.ಪಂ ಅಧ್ಯಕ್ಷೆ ಹೇಮಾವತಿ, ಮಳ್ಳೂರು ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ, ಆನೂರು ಗ್ರಾಪಂ ಸದಸ್ಯೆ ವರಲಕ್ಷ್ಮಿ ಸಂತೋಷ್, ಜನಪರ ೌಂಡೇಷನ್ ಮುಖ್ಯಸ್ಥ ಶಶಿರಾಜ್ ಹರತಲೆ, ಕಲಾವಿದ ಜಿ.ಮುನಿರೆಡ್ಡಿ, ಚಂದ್ರು, ಮುನಿರಾಜ್, ಎಫ್ಇಎಸ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ನಿಖತ್ ಪರ್ವೀಣ್, ಅಭಿಯಂತರ ಉತ್ತನ್ನ, ಸಿ.ಸೌಭಾಗ್ಯ, ಎಸ್.ಜಿ. ಗೋಪಿ, ಲೀಲಾವತಿ, ವೈ.ಎನ್. ನರಸಿಂಹಪ್ಪ, ಎನ್.ರಮೇಶ್, ಮತ್ತು ಸಿ.ಎಸ್.ಎ ಸಂಸ್ಥೆಯ ರಮೇಶ್, ಬೂದಾಳ ರಾಮಾಂಜಿನಪ್ಪ, ನರಸಿಂಹಪ್ಪ ಮತ್ತಿತರರು ಹಾಜರಿದ್ದರು.