ಶಿಕ್ಷಣ ಸಂಸ್ಥೆಗಳ ಸ್ವೇಚ್ಛಾಚಾರ

blank

ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹೊಸ ಶೈಕ್ಷಣಿಕ ವರ್ಷಾರಂಭಕ್ಕೆ ದಿನಗಣನೆ ಶುರುವಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ‘ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಮುಂದಿನ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯಂತೆ ತರಗತಿವಾರು ಲಭ್ಯವಿರುವ ಸೀಟುಗಳು, ಶುಲ್ಕ, ಪಠ್ಯಕ್ರಮ, ಬೋಧನೆಯ ಮಾಧ್ಯಮ ಮುಂತಾದ ವಿವರಗಳನ್ನು ಸಾರ್ವಜನಿಕಗೊಳಿಸಬೇಕು’ ಎಂದು ಆ ಸುತ್ತೋಲೆಯಲ್ಲಿ ತಾಕೀತು ಮಾಡಿದ್ದಾರೆ. ಸರ್ಕಾರ ನಿಗದಿಪಡಿಸಿದ್ದನ್ನು ಮೀರಿ ಹೆಚ್ಚುವರಿ ಶುಲ್ಕವನ್ನು ಯಾವುದೇ ಶಿಕ್ಷಣ ಸಂಸ್ಥೆಯೂ ಪಡೆಯಬಾರದು ಎಂಬ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಪ್ರತಿ ವರ್ಷ ಹೊರಡಿಸಿದರೂ ಇದು ಖಾಸಗಿ ಶಾಲೆ- ಕಾಲೇಜುಗಳಿಗೆ ಅನ್ವಯವೇ ಆಗುವುದಿಲ್ಲ. ಶಾಲಾ ಅಭಿವೃದ್ಧಿಗೆ ದೇಣಿಗೆ (ಡೊನೇಶನ್) ಎಂಬ ಹೆಸರಿನಲ್ಲಿ ಅವುಗಳ ಸುಲಿಗೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ಇದ್ಯಾವುದನ್ನೂ ಅವು ಕದ್ದುಮುಚ್ಚಿ ಮಾಡುವುದಿಲ್ಲ. ರಾಜಾರೋಷವಾಗಿಯೇ ಪಾಲಕರಿಂದ ಹಣ ವಸೂಲಿ ಮಾಡುತ್ತವೆ. ಕೊಡಲು ನಿರಾಕರಿಸಿದರೆ ಪ್ರವೇಶವೇ ಸಿಗುವುದಿಲ್ಲ.

ಇನ್ನು ಇದೇ ಸುತ್ತೋಲೆಯಲ್ಲಿ ‘ಶಾಲಾ ಪ್ರವೇಶಾತಿಯ ವೇಳಾಪಟ್ಟಿ ಪ್ರಕಟಿಸಬೇಕು, ಅರ್ಜಿ ಸ್ವೀಕೃತಿ, ಅರ್ಜಿಗಳ ಪರಿಶೀಲನೆ ಮುಂತಾದ ವಿವರ ಒದಗಿಸಬೇಕು, ಪ್ರವೇಶ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು’ ಎಂದು ಆದೇಶ ನೀಡಿರುವುದಂತೂ ಹಾಸ್ಯಾಸ್ಪದವೇ ಸರಿ. ಏಕೆಂದರೆ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕಿಂತ ಸಾಕಷ್ಟು ಮೊದಲೇ, ಅಂದರೆ ಸುಮಾರು ಒಂದು ವರ್ಷ ಅಥವಾ ಆರು ತಿಂಗಳ ಮೊದಲೇ ಈ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿಯನ್ನು ಮುಗಿಸಿರುತ್ತಾರೆ. ಹಿಂದಿನ ತರಗತಿಯ ಫಲಿತಾಂಶ ಪ್ರಕಟವಾಗುವ ಮುಂಚೆಯೇ ಪಾಲಕರಿಗೆ ಪ್ರವೇಶದ ಅರ್ಜಿಯನ್ನು ವಿತರಿಸಲಾಗುತ್ತದೆ. ಸಂದರ್ಶನಗಳನ್ನೂ ನಡೆಸಲಾಗುತ್ತದೆ. ಇದು ನಿಯಮಗಳಿಗೆ ವಿರುದ್ಧವಾದ ನಡೆ ಎಂಬುದು ಗೊತ್ತಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ತಲೆಕೆಡಿಸಿಕೊಳ್ಳುವುದಿಲ್ಲ.

ಇನ್ನು ಐಸಿಎಸ್​ಇ, ಸಿಬಿಎಸ್​ಇ ಪಠ್ಯ ಕ್ರಮ ಅಳವಡಿಸಿಕೊಂಡಿರುವ ಖಾಸಗಿ ಶಾಲೆಗಳಂತೂ ರಾಜ್ಯ ಸರ್ಕಾರದ ಆದೇಶ, ಸುತ್ತೋಲೆ, ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡುವುದಿಲ್ಲ. ‘ಸ್ಥಳೀಯ ಸರ್ಕಾರದ ಶಿಕ್ಷಣ ಕಾಯ್ದೆ, ನೀತಿ-ನಿಯಮಗಳು ಈ ಶಾಲೆಗಳಿಗೆ ಅನ್ವಯವಾಗುತ್ತವೆ’ ಎಂಬುದಾಗಿ ಸಿಬಿಎಸ್​ಇ ಬೈಲಾದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆಯಾ ರಾಜ್ಯ ಸರ್ಕಾರಗಳು ನೀಡುವ ನಿರ್ದೇಶನ, ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ತೆಗೆದುಕೊಳ್ಳುವ ಶಿಸ್ತುಕ್ರಮದ ಬಗ್ಗೆಯೂ ಅದರಲ್ಲಿ ವಿವರಿಸಲಾಗಿದೆ. ಐಸಿಎಸ್​ಇ ಬೈಲಾದಲ್ಲೂ ಸ್ಥಳೀಯ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಶಾಲೆಗಳ ಮಾನ್ಯತೆ ಹಿಂತೆಗೆದುಕೊಳ್ಳುವ ಪ್ರಸ್ತಾಪ ಇದೆ. ಇಷ್ಟೆಲ್ಲ ಇದ್ದರೂ ಇವು ರಾಜ್ಯ ಸರ್ಕಾರದ ಅಂಕುಶದೊಳಗಿಲ್ಲ. ಇದಕ್ಕೆ ಶಾಲೆಗಳು ಕಾರಣವೋ, ಅಧಿಕಾರಿಗಳು ಕಾರಣವೋ ಎಂಬುದರ ಬಗ್ಗೆ ಸರ್ಕಾರವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಸುತ್ತೋಲೆ ಹೊರಡಿಸುವುದು ಅಧಿಕಾರಿಗಳಿಗೆ ಒಂದು ರೀತಿಯಲ್ಲಿ ವಾರ್ಷಿಕ ಶ್ರಾದ್ಧದಂತೆ ಆಗಿಬಿಟ್ಟಿದೆ. ಆ ನಿಯಮಗಳನ್ನು ಖಾಸಗಿ ಸಂಸ್ಥೆಗಳು ಪಾಲಿಸುತ್ತಿವೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸುವ ಗೋಜಿಗೂ ಅಧಿಕಾರಿಗಳು ಹೋಗುವುದಿಲ್ಲ. ಪಾಲಕರು ದೂರು ನೀಡಿದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಅಥವಾ ಎಚ್ಚೆತ್ತುಕೊಂಡಂತೆ ನಟಿಸುತ್ತಾರೆ. ನಿಯಮ ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಧೈರ್ಯವನ್ನು ತೋರಿಸುವುದಿಲ್ಲ. ಶಿಕ್ಷಣ ಸಂಸ್ಥೆಗಳ ಈ ರೀತಿಯ ಧಾರ್ಷ್ಯr ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಅಂತಿಮವಾಗಿ ಶೈಕ್ಷಣಿಕ ವ್ಯವಸ್ಥೆಯ ಅವನತಿಗೆ ಕಾರಣವಾಗುತ್ತದೆ. ಇಂಥ ವ್ಯವಸ್ಥೆಯನ್ನು ಸರಿಪಡಿಸಲು ಶಿಕ್ಷಣ ಸಚಿವರು ಮುಂದಾಗುವುದು ಸೂಕ್ತ.

Share This Article

ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್‌ನ ಶತ್ರುಗಳು! Cholesterol

Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…

ದಾಲ್ಚಿನ್ನಿ ಸೇವನೆ ಪುರುಷರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಯಾಕೆ ಗೊತ್ತಾ? | Cinnamon

Cinnamon: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ. ಇದು…

ಬೀದಿ ಬದಿ ಅಂಗಡಿಗಳಿಂದ ಜ್ಯೂಸ್​ ಖರೀದಿಸಿ ಕುಡಿಯುವಾಗ ಎಚ್ಚರ… ಈ ಜ್ಯೂಸ್ ಅತ್ಯಂತ ಅಪಾಯಕಾರಿ! Soft Drinks

Soft Drinks : ದೇಶಾದ್ಯಂತ ಬೇಸಿಗೆಯ ಬಿಸಿ ಸುಡುತ್ತಿದೆ. ಸೂರ್ಯ ಶಾಖದಿಂದ ಬಳಲಿ ಬೆಂಡಾದ ಜನರು…