ಹಾಸನ: ಜಿಲ್ಲೆಯ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರ ಜಿಲ್ಲಾ ಕಳ್ಳರನ್ನು ಶಾಂತಿಗ್ರಾಮ ಠಾಣೆ ಪೊಲೀಸರು ಬಂಧಿಸಿದ್ದು, 3.10 ಲಕ್ಷ ರೂ. ಹಾಗೂ 2 ಕಾರು ವಶಪಡಿಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿ ಗ್ರಾಮದ ಇಲಿಯಾಸ್ (28), ಮಡಿಕೇರಿ ತಾಲೂಕಿನ ಶಕೀರ್ (20), ಇಬ್ರಾಹಿಂ (23), ಬಿ.ಜೆ. ಅರುಣ್ (23) ಬಂಧಿತರು. ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿ ಗ್ರಾಮದ ಸಮೀರ್ ಅಹಮದ್ (28) ಎಂಬಾತ ನಾಪತ್ತೆಯಾಗಿದ್ದಾನೆ.
ಶಾಂತಿಗ್ರಾಮ, ನುಗ್ಗೇಹಳ್ಳಿ, ಗಂಡಸಿ, ಹಳ್ಳಿಮೈಸೂರು, ಚನ್ನರಾಯಪಟ್ಟಣ, ಬಾಣಾವರ ಠಾಣಾ ವ್ಯಾಪ್ತಿಯಲ್ಲಿ ಮೇಕೆ, ಹೋತ, ಕುರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕರಣ ದಾಖಲಾಗಿದ್ದವು.
ಮಳಲಿ ಗ್ರಾಮದಲ್ಲಿ ಸೆರೆ: ಮೂಕ ಪ್ರಾಣಿಗಳ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಬೆಂಗಳೂರು, ಕುಶಾಲನಗರ, ಮೈಸೂರು ನಗರಗಳಿಂದ ಮಾಹಿತಿ ತರಿಸಿಕೊಂಡಿದ್ದರು. ಜ. 3ರ ಸಂಜೆ 6.30ರ ಸಮಯದಲ್ಲಿ ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದಲ್ಲಿ 2 ಕಾರಿನಲ್ಲಿ ಬಂದ ನಾಲ್ವರನ್ನು ಪೊಲೀಸರು ತಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಹಾಸನ ಗ್ರಾಮಾಂತರ ಠಾಣೆ ಸಿಪಿಐ ಸತ್ಯನಾರಾಯಣ, ಶಾಂತಿಗ್ರಾಮ ಠಾಣೆ ಎಸ್ಐ ಎಸ್.ಕೆ. ಕೃಷ್ಣ, ಪೇದೆಗಳಾದ ಸುಬ್ರಹ್ಮಣ್ಯ, ದೇವರಾಜು, ಮಂಜುನಾಥ್, ಜಮೀಲ್ ಅಹಮದ್, ರೂಪೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.