ಮಂಗಳೂರು: ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಬಗ್ಗೆ ಸಾರ್ವಜನಿಕರಿಗೆ ಸತ್ಯ ತಿಳಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಇತ್ತೀಚೆಗೆ ಶಾಂತಿ ಕದಡಿದೆ. ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಗಲಭೆಯಿಂದ ಸಮುದಾಯಗಳ ನಡುವೆ ಬಿರುಕು ಮೂಡಿದೆ. ಈಗ ಪತ್ತೆಯಾಗಿರುವ ಸಜೀವ ಬಾಂಬ್ ಇನ್ನಷ್ಟು ಭೀತಿಗೆ ಕಾರಣವಾಗಿದೆ. ಹೀಗಾಗಿ ಬಾಂಬ್ ಬಗ್ಗೆ ಸರ್ಕಾರ ಜನರಿಗೆ ಸತ್ಯದ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಬಾಂಬ್ ಬಗ್ಗೆ ಕಟ್ಟುಕತೆಗಳು ಹುಟ್ಟಿಕೊಂಡಿವೆ. ಇದಕ್ಕೆ ತೆರೆ ಎಳೆಯಲು ಸರ್ಕಾರ ಸತ್ಯ ಹೇಳಬೇಕು. ಪಟಾಕಿ ಮದ್ದಿಗೆ ತುಂಡಾದ ವೈರುಗಳನ್ನು ಜೋಡಿಸಲಾಗಿದೆ ಎಂಬ ಅನುಮಾನ ಕಾಡುತ್ತಿದೆ. ಹೀಗಾಗಿ ತನಿಖೆ ನಡೆಸಿ ನಿಜ ಹೇಳಬೇಕೆಂದರು.
ನಾನು ಸಿಎಂ ಆಗಿದ್ದಾಗ ರಾಮನಗರಲ್ಲಿ ಬಾಂಬ್ ಪತ್ತೆ ಎಂದು ವರದಿ ಮಾಡಲಾಗಿತ್ತು. ಆದರೆ ಪರಿಶೀಲನೆ ನಡೆಸಿದಾಗ ಆನೆ ಪಟಾಕಿ ಎಂದು ತಿಳಿದು ಬಂತು. ಸರ್ಕಾರ ತನಿಖೆ ನಡೆಸಿ ಜನರ ಮುಂದೆ ನಿಜ ಹೇಳಬೇಕು ಎಂದು ಅವರು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್)