ಬೆಳಗಾವಿ: ವಾಮ ಮಾರ್ಗದಿಂದ ಗಳಿಸಿದ ಹಣ ಒಳ್ಳೆ ಕೆಲಸಕ್ಕೆ ಸಲ್ಲುವುದಿಲ್ಲ. ಬದಲಿಗೆ ಸತ್ಯ, ಶುದ್ಧ ಕಾಯಕದಿಂದ ಸಂಪಾದಿಸಿದ ದ್ರವ್ಯ ಮಾತ್ರ ಮಾನಸಿಕ ನೆಮ್ಮದಿ ತಂದುಕೊಡುತ್ತದೆ. ಇದನ್ನು ದಾಸೋಹಕ್ಕೆ ಸಮರ್ಪಿಸಬೇಕು ಎಂದು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.
ನಗರದ ಕಾರಂಜಿ ಮಠದಲ್ಲಿ ಈಚೆಗೆ 183ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಾದಿ ಶರಣರು ಕೇವಲ ವಚನಕಾರರಷ್ಟೇ ಅಲ್ಲ. ಅವರು ಸ್ವತಃ ಆರ್ಥಿಕ ಚಿಂತಕರಾಗಿದ್ದರು ಎಂದರು.
ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮುಖ್ಯಸ್ಥೆ ಜಯಶ್ರೀ ಎ.ಎಂ ಮಾತನಾಡಿ, ಶರಣರು ಸಂಗ್ರಹ ವಿರೋಧಿಗಳಾಗಿದ್ದರು. ಯಾವ ಪ್ರಾಣಿ, ಪಕ್ಷಿಗಳು ಸಹ ಇಂದಿಗೆ ನಾಳೆಗೆ ಬೇಕೆಂದು ಕೂಡಿಡುವುದಿಲ್ಲ.
ಅಂದಿನ ಅನ್ನವನ್ನು ಅಂದೇ ಉಣ್ಣುವುದು ಅವುಗಳ ಸ್ವಭಾವ. ಆದರೆ, ಮನುಷ್ಯ ಮಾತ್ರ ತನ್ನಲ್ಲಿ ಎಷ್ಟೇ ಹಣ, ಸಂಪತ್ತು, ಅಧಿಕಾರ, ಸ್ಥಾನಮಾನಗಳಿದ್ದರೂ ಸಂತಸ ಪಡದೆ ದುರಾಸೆಯಲ್ಲಿ ಬದುಕುತ್ತಿರುವುದು ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಪ್ರಸ್ತುತ ಶರಣರ ಆರ್ಥಿಕ ನೀತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಶಂಕರ ದಳವಾಯಿ ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ ಶಾನವಾಡ ಸ್ವಾಗತಿಸಿದರು. ಕುಮಾರೇಶ್ವರ ಸಂಗೀತ ಪಾಠಶಾಲೆ ಮಕ್ಕಳು ವಚನ ಪ್ರಾರ್ಥನೆ ಮಾಡಿದರು. ಉಪನ್ಯಾಸಕ ಎ.ಕೆ. ಪಾಟೀಲ ನಿರೂಪಿಸಿದರು. ವಕೀಲ ವಿ.ಕೆ. ಪಾಟೀಲ ವಂದಿಸಿದರು.