ಸವದತ್ತಿ: ಕರ್ನಾಟಕದ ಅಭಿವೃದ್ಧಿಗೆ ದಿ.ಸುರೇಶ ಅಂಗಡಿ ಅವರ ಕೊಡುಗೆ ಅಪಾರ ಎಂದು ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಹೇಳಿದ್ದಾರೆ.
ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ಸಂಘ ಪರಿವಾರದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸುರೇಶ ಅಂಗಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಸ್ನೇಹಪರ ನಾಯಕರಾಗಿದ್ದ ಸುರೇಶ ಅಂಗಡಿಯವರು ಕರ್ನಾಟಕಕ್ಕೆ 17 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವಲ್ಲಿ ಯಶಸ್ವಿಯಾಗಿದ್ದರು.
ಸಚಿವರಾದ ಬಳಿಕ ಅನೇಕ ಬಾಕಿ ಕಾಮಗಾರಿಗಳಿಗೆ ವೇಗ ನೀಡಿದ್ದ ಅವರು ಅನೇಕ ಜನಪರ ಯೋಜನೆಗಳನ್ನು ಹಾಕಿಕೊಂಡಿದ್ದರು. ಸುರೇಶ ಅಂಗಡಿ ಅವರು ನನ್ನಂತಹ ಅನೇಕ ಕಿರಿಯ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಅಂಗಡಿ ಅವರ ಕಾರ್ಯವನ್ನು ಸ್ಮರಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂತ್ರಿ, ಮಹೇಶ ಚಿತ್ತರಗಿ, ಡಾ.ಹೇಮಂತ ಭಸ್ಮೆ, ಪುರಸಭೆ ಸದಸ್ಯ ದೀಪಕ ಜಾನ್ವೇಕರ, ಆರ್ಎಸ್ಎಸ್ ಪ್ರಮುಖ ನರಸಿಂಹ ಕುಲಕರ್ಣಿ, ಬಸವರಾಜ ಕಾರದಗಿ, ಸಿದ್ದಯ್ಯ ವಡೆಯರ, ಮತ್ತಿತರರು ಇದ್ದರು.
ತಪ್ಪದೇ ಮಾಸ್ಕ್ ಧರಿಸಿ: ಜನರನ್ನು ಕರೊನಾ ಸೋಕಿನಿಂದ ಪಾರು ಮಾಡಲು ಪೊಲೀಸ್ , ಪುರಸಭೆ ಅಧಿಕಾರಿಗಳು ಮಾಸ್ಕ್ ಧರಿಸದಿದ್ದವರಿಗೆ ದಂಡ ವಿಧಿಸುತ್ತಿದ್ದಾರೆ. ವಿನಾಕಾರಣ ದಂಡ ಕಟ್ಟುವ ಬದಲು ಮಾಸ್ಕ್ ಧರಿಸಿ ಸೋಂಕು ತಗುಲುವಿಕೆಯಿಂದ ದೂರವಿರಿ ಎಂದು ಮಾಮನಿ ಅವರು ಸಭೆಯಲ್ಲಿ ಜನರನ್ನು ಕೋರಿದರು.
ರಾಮದುರ್ಗ ವರದಿ: ತಾಲೂಕಿನ ಶಿವಪೇಠ ಗ್ರಾಮದಲ್ಲಿ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ದಿ.ಸುರೇಶ ಅಂಗಡಿ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಎಸ್.ಆರ್.ಗುರಬಸಣ್ಣವರ, ಸುರೇಶ ಗಣಮುಖಿ, ಮಲ್ಲಪ್ಪ ಬೀಳಗಿ, ರಾಚಪ್ಪ ಬ. ಗುರುಬಸಣ್ಣವರ, ಬಸಪ್ಪ ಬೇವಿನಮರದ, ಶಂಕರ ಚನ್ನಪ್ಪನವರ, ನಾಗಪ್ಪ ಗಣಮುಖಿ, ಮುರುಗೆಪ್ಪ ಬೇವಿನಮರದ, ನಾಗಪ್ಪ ಸಿಂಪಿಗೇರ ಇತರರಿದ್ದರು.