ಚಿಕ್ಕೋಡಿ: ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳುವ ಅಂಗವಿಕಲರಿಗೆ ಉದ್ಯೋಗ ಚೀಟಿ ವಿತರಿಸಿ ಉದ್ಯೋಗ ನೀಡಿ ಆತ್ಮಸ್ಥೈರ್ಯ ತುಂಬಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಅಂಗವಿಕಲರ ಹಾಗೂ ಪುನರ್ವಸತಿ ಕಾರ್ಯಕರ್ತರಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, 18 ವರ್ಷದ ಮೇಲ್ಪಟ್ಟ ಅರ್ಹ ಅಂಗವಿಕಲರಿಗೆ ಮನರೇಗಾ ಯೋಜನೆಯಡಿ ಅವರ ಸಾಮರ್ಥ್ಯಕ್ಕನುಗುಣವಾಗಿ ಕೂಲಿ ಕೆಲಸ ನೀಡಲಾಗುತ್ತದೆ. 2023-24ನೇ ಸಾಲಿನಲ್ಲಿ ಉದ್ಯೋಗ ಚೀಟಿ ವಿತರಣಾ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವಿ ಮಾತನಾಡಿ, ಮನರೇಗಾದಡಿ ವರ್ಷಕ್ಕೆ 100 ದಿನಗಳ ಉದ್ಯೋಗ ಕೊಡಲಾಗುವುದು. ಅಂಗವಿಲತೆಯ ಪ್ರಮಾಣಕ್ಕನುಗುಣವಾಗಿ ಕೂಲಿ ಕೆಲಸ ನೀಡಲಾಗವುದು. ಅಂಗವಿಕಲರನ್ನು ಕಾಯಕ ಬಂಧುಗಳಾಗಿ ವಿಶೇಷ ಆದ್ಯತೆ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ 316 ರೂ. ಕೂಲಿ ಇದೆ. ವೈಯಕ್ತಿಕ ಕಾಮಗಾರಿ ತೆಗೆದುಕೊಂಡು ಜೀವನ ಸದೃಢಗೊಳಿಸಿಕೊಳ್ಳಬಹುದು ಎಂದರು.
ಅಂಗವಿಕಲೆ ಚಂದ್ರವ್ವ ತಂಗೋಜಿ ಮಾತನಾಡಿದರು. ಐಇಸಿ ಸಂಯೋಜಕ ರಂಜಿತ ಕಾಂಬಳೆ, ಎಂ.ಐ.ಎಸ್ ಸಂಯೋಜಕ ಚೇತನ ಶಿರಹಟ್ಟಿ, ತಾಲೂಕು ಪುನರ್ವಸತಿ ಕಾರ್ಯಕರ್ತೆಯರಾದ ಅನಸೂಯಾ ಬಾಳಪ್ಪಗೋಳ, ಸವಿತಾ ಪಾಟೀಲ ಇತರರಿದ್ದರು.