ಮುಂಡರಗಿ: ಜನಪದಿಯ ಸಂಸ್ಕೃತಿ ಪರಂಪರೆ ಮೇಲೆಯೇ ಭಾರತ ದೇಶದ ನಾಗರಿಕತೆ, ಸಂಸ್ಕೃತಿ, ಸಂಸ್ಕಾರವಿದೆ. ಗ್ರಾಮೀಣ ಭಾಗದ ಮೂಲ ಜನಪದ ಹಾಡಿನಲ್ಲಿ ದೇಶದ ಸಂಸ್ಕೃತಿಯ ಸಂಸ್ಕಾರ ಕಾಣುತ್ತೇವೆ. ಆಧುನಿಕ ತಂತ್ರಜ್ಞಾನ ಮನುಷ್ಯನ ರಂಜನೆಯೊಳಗಡೆ ಮೂಲ ಸಂಸ್ಕೃತಿ ವ್ಯವಸ್ಥೆ ನಾಶವಾಗುತ್ತಿದೆ. ದೇಶದ ಮೂಲ ಸಂಸ್ಕೃತಿಯನ್ನು ಎಂದಿಗೂ ಬಿಡಬಾರದು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 58ನೇ ತ್ರೈಮಾಸಿಕ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜನಪದವು ಮೌಖಿಕವಾಗಿ ಉಳಿಯಿತೇ ಹೊರತು ಗ್ರಂಥಸ್ಥವಾಗಿ ಉಳಿಯಲಿಲ್ಲ. ಜನಪದರಿಗೆ ಅಕ್ಷರ ಜ್ಞಾನವಿಲ್ಲದಿದ್ದರೂ ಹೃದಯದ ಜ್ಞಾನವಿತ್ತು. ಜಗತ್ತಿನಲ್ಲಿ ಮುಂದುವರಿದು ಬಂದ ಯಾವುದೇ ವಿಚಾರಧಾರೆಯು ಜನಪದ ಎಂಬ ಕುಟುಂಬ ಧರ್ಮದಿಂದ ಆರಂಭವಾಗಿದೆ. ಅಕ್ಷರ, ಶಿಕ್ಷಣಕ್ಕಿಂತ ಮೂಲ ಸಂಸ್ಕೃತಿಯ ಅರಿವು ಮುಖ್ಯ. ಕೃಷಿ, ಧರ್ಮ ಹಾಗೂ ಜನಪದ ಸಂಸ್ಕೃತಿಯಿಂದ ಬಂದವರೆ ದೇಶದ ಸಂಸ್ಕೃತಿ ಎನ್ನುವ ಬೇರಿಗೆ ನೀರು ಹಾಕಿದವರು. ಬಸವ ಸಂಸ್ಕೃತಿಯ ಧರ್ಮ ಜನಪದ ಸೊಗಡಿನ ಧರ್ಮವಾಗಿದೆ. ಬಸವ ಧರ್ಮವೆಂದರೆ ಕೆಳವರ್ಗದವರ ಸಂಸ್ಕೃತಿ ಉಳಿಸುವಂತ ಧರ್ಮವಾಗಿತ್ತು. ಮೂಲ ಜನಪದ ಸಂಸ್ಕೃತಿ ಉಳಿಸುವ ಕೆಲಸ ಆಗಬೇಕು ಎಂದರು.<
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಮನುಷ್ಯನಿಗೆ ಶಿಸ್ತು, ಸಮಯ ಪ್ರಜ್ಞೆ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸುವುದಕ್ಕೆ ಸಾಧ್ಯ. ಲಿಂ.ಡಾ. ಸಿದ್ಧಲಿಂಗ ಶ್ರೀಗಳು ತಾಯಿಹೃದಯದವರಾಗಿದ್ದರು. ಅವರನ್ನು ಶ್ರೀ ನಿಜಗುಣಪ್ರಭು ಶ್ರೀಗಳಲ್ಲಿ ಕಾಣುತ್ತಿದ್ದೇವೆ ಎಂದರು.
ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ವಿವಿಧ ಜನಪದ ಗೀತೆಗಳನ್ನು ಹಾಡಿದರು. ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಜಿಲ್ಲಾ ಶ್ರೇಷ್ಠ್ಠ ವರ್ತಕ ಪ್ರಶಸ್ತಿ ಪುರಸ್ಕೃತ ಅಮೀನಸಾಬ ಬಿಸನಹಳ್ಳಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಅವರಿಗೆ ಹಾಗೂ ಲಿಂ. ಕಲಾವತಿ ಸೊಲಗಿ ಸ್ಮರಣೆಯಲ್ಲಿ ಶಿವಾನುಭವ ಭಕ್ತಿಸೇವೆ ವಹಿಸಿಕೊಂಡಿದ್ದ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಡಾ. ನಿಂಗು ಸೊಲಗಿ ಅವರ ರಚನೆಯ ‘ನನಿನ್ನ ನಗಿ ನೋಡಿ’ ಕೃತಿ ಆಧಾರಿತ ಬಾಗಲಕೋಟಿ ಸಂಗಮ ಕಲಾ ತಂಡ ಹಾಗೂ ಸಾಂಸ್ಕೃತಿಕ ಸಂಘದಿಂದ ‘ದಾಂಪತ್ಯ ಗೀತ’ ನಾಟಕ ಪ್ರದರ್ಶನವಾಯಿತು. ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ.ಜಿ.ಬಿ. ಬೀಡನಾಳ ಉಪಸ್ಥಿತರಿದ್ದರು. ಶಿಕ್ಷಕ ವಿಶ್ವನಾಥ ಉಳ್ಳಾಗಡ್ಡಿ ಕಾರ್ಯಕ್ರಮ ನಿರೂಪಿಸಿದರು.