ಕಾರವಾರ: ಆಳಸಮುದ್ರ ಯಾಂತ್ರೀಕೃತ ಮೀನುಗಾರರಿಗೆ ಜೂನ್ 1 ರಿಂದ ಜುಲೈ 31 ರವರೆಗೆ ತಾತ್ಕಾಲಿಕವಾಗಿ ತೆರೆ ಬೀಳಲಿದ್ದು, ಬೋಟ್ ಗಳು ಈಗಾಗಲೇ ದಡ ಸೇರಿವೆ.
ಮೀನುಗಾರಿಕೆಯಲ್ಲಿ ತೊಡಗಿದ್ದ ಹೊರ ರಾಜ್ಯಗಳ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಿದ್ದಾರೆ. ದೋಣಿಗಳು ದಕ್ಕೆ ಸೇರಿದ್ದು, ಕೆಲವು ದೋಣಿಗಳು ನೀರಿನಿಂದ ಮೇಲೆ ಹತ್ತಿವೆ.
ದೋಣಿ ಹಲಗೆಗಳ ರಿಪೇರಿ, ಇಂಜಿನ್ಗಳ ದುರಸ್ತಿ ಕಾರ್ಯ ಈ ಸಮಯದಲ್ಲಿ ನಡೆಯಲಿದೆ. ಬಲೆಗಳನ್ನು ಒಪ್ಪವಾಗಿ ಮಡಚಿಡುವ, ದೋಣಿಗಳನ್ನು ಸ್ವಚ್ಛಮಾಡಿ ಬಂದರಿನಲ್ಲಿ ಕಟ್ಟಿಡುತ್ತಿರುವ ಧೃಶ್ಯಗಳು ಮಂಗಳವಾರ ಕಾರವಾರ, ಮುದಗಾ ಬಂದರುಗಳಲ್ಲಿ ಕಂಡುಬಂದವು.
ಪ್ರಸವ ಕಾಲ: ಜೂನ್ನಿಂದ ಎರಡು ತಿಂಗಳು ಕೆಲ ಸಮುದ್ರ ಜೀವಿಗಳ ಪ್ರಸವ ಕಾಲ.ಮಳೆ ಶುರುವಾಗುತ್ತಿದ್ದಂತೆ ನದಿಗಳು ಘಟ್ಟದಿಂದ ಭರಪೂರ ಆಹಾರವನ್ನು ಹೊತ್ತು ತಂದು ಸಮುದ್ರಕ್ಕೆ ಸೇರಿಸುತ್ತವೆ.
ಇನ್ನೊಂದೆಡೆ ಮೀನುಗಳು ಮೊಟ್ಟೆ ಇಡುತ್ತವೆ. ಮೀನುಗಳ ಸಂತತಿಯನ್ನು ರಕ್ಷಿಸುವ ಸಲುವಾಗಿ, ಸುಸ್ಥಿರ ಮೀನುಗಾರಿಕೆಯ ಉದ್ದೇಶದಿಂದ ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆಯನ್ನು ನಿರ್ಬಂಧಿಸಲಾಗುತ್ತದೆ.
ಇದನ್ನೂ ಓದಿ:ವಿದೇಶಿ ವ್ಯಾಮೋಹ ಬಿಡಿ, ಸ್ವದೇಶದಲ್ಲೇ ಸೇವೆ ಮಾಡಿ
ಅಲ್ಲದೆ, ಈ ಅವಧಿಯಲ್ಲಿ ಮಾನ್ಸೂನ್ ಮಾರುತಗಳ ಪ್ರಭಾವದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ದವಾಗುವ ಸಮುದ್ರದಲ್ಲಿ ಮೀನುಗಾರಿಕೆ ಅಪಾಯಕರವೂ ಆಗಿದೆ.
ರಾಜ್ಯದಿಂದ ರಾಜ್ಯಕ್ಕೆ ಈ ನಿರ್ಬಂಧದ ಅವಽಯಲ್ಲಿ ಅಲ್ಪ ವ್ಯತ್ಯಾಸವೂ ಇದೆ. ಈ ಅವಧಿಯಲ್ಲಿ 10 ಎಚ್ಪಿಗಿಂತ ಕಡಿಮೆ ಸಾಮರ್ಥ್ಯದ ಇಂಜಿನ್ಗಳಿರುವ ಸಾಂಪ್ರದಾಯಿಕ ಬೋಟ್ಗಳನ್ನು ಬಳಸಿ ಮೀನುಗಾರಿಕೆ ನಡೆಸಬಹುದು.
ಮೀನು ಇಳುವರಿ ಹೆಚ್ಚಳ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೀನುಗಾರಿಕೆ ಉತ್ತಮವಾಗಿದೆ. 2021-22 ನೇ ಸಾಲಿನಲ್ಲಿ ಅಂದಾಜು 1,17,266 ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿತ್ತು. 2020-21 ರಲ್ಲಿ 1,02,800 ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿತ್ತು.
ಈ ಅವಧಿಯಲ್ಲಿ (2022-23) ಮಾರ್ಚ್ ಅಂತ್ಯದವರೆಗೆ 1,31,039 ಮೆಟ್ರಿಕ್ ಟನ್ ಮೀನು ಉತ್ಪತ್ತಿಯಾಗಿದೆ. ಅಂದರೆ ಸುಮಾರು 13,773 ಮೆಟ್ರಿಕ್ ಟನ್ ಹೆಚ್ಚು ಇಳುವರಿ ಬಂದಿದೆ. ಜಿಲ್ಲೆಯಲ್ಲಿ 1,139 ಪರ್ಸೀನ್ ಹಾಗೂ 3,952 ಟ್ರಾಲರ್ ಬೋಟ್ಗಳು ಆಳ ಸಮುದ್ರ ಮೀನುಗಾರಿಕೆ ನಡೆಸುತ್ತವೆ. ಈ ಬಾರಿ ಪರ್ಸೀನ್ ಬೋಟ್ಗಳಿಗೆ ಕೊನೆಯವರೆಗೂ ಬಂಪರ್ ಬೇಟೆಯಾಗಿದೆ.