ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನಾಪತ್ತೆಯಾದ ಸಹೋದರನ ಚಿಂತೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಭಟ್ಕಳ ಬೆಳ್ಣಿ ನಿವಾಸಿ ಚಂದ್ರಶೇಖರ್ ಶನಿಯಾರ ಮೊಗೇರ (30) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಮಲ್ಪೆ ಮೀನುಗಾರಿಕೆ ಬಂದರಿನಿಂದ ಡಿ.13ರಂದು ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ನ ಏಳು ಮೀನುಗಾರರಲ್ಲಿ ಭಟ್ಕಳದ ಬೆಳ್ಣಿ ನಿವಾಸಿ ರಮೇಶ್ ಶನಿಯಾರ ಮೊಗೇರ ಓರ್ವ. ಅವರ ಸಹೋದರ ಚಂದ್ರಶೇಖರ್ ನಾಲ್ಕೈದು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ 10:30ಕ್ಕೆ ಚಿಕಿತ್ಸೆ ಫಲಿಸದೆ ಚಂದ್ರಶೇಖರ್ ಮೃತಪಟ್ಟಿದ್ದಾರೆ. ಮೃತದೇಹವನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿರಿಸಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ವಿಷ ಸೇವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದರಿಂದ ಉಳಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸಂಬಂಧಿಕರು, ಸ್ನೇಹಿತರು. ಕೆಲವು ದಿನಗಳಿಂದ ಅನಾರೋಗ್ಯ ಎಂದು ಹೇಳುತ್ತಿದ್ದು, ಅಲ್ಲಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಜಾಂಡೀಸ್ ಉಲ್ಬಣಿಸಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಸೋಮವಾರ ನೆರೆಮನೆಯವರ ಬಳಿ, ತಾನು ಆತ್ಮಹತ್ಯೆಗೆ ನಿರ್ಧರಿಸಿ ಇಲಿ ಪಾಷಾಣ ಸೇವಿಸಿದ ಬಗ್ಗೆ ಹೇಳಿಕೊಂಡಿದ್ದರು. ಕೂಡಲೇ ಸ್ನೇಹಿತ ಮಾಧವ ಮತ್ತು ಇನ್ನೊರ್ವ ಸಹೋದರ ನಾಗರಾಜ ಭಟ್ಕಳದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ, ಸಾಯಂಕಾಲ 7 ಗಂಟೆ ವೇಳೆಗೆ ಅವರನ್ನು ಉಡುಪಿಗೆ ಕರೆ ತಂದಿದ್ದರು.
20 ಬಾಟಲಿ ರಕ್ತ: ವಿಷ ಸೇವಿಸಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಚಂದ್ರಶೇಖರ್ ಲಿವರ್ ಮತ್ತು ಕಿಡ್ನಿ ತೀವ್ರ ಹಾನಿಯಾಗಿತ್ತು. ಇದರಿಂದ ದೇಹದಲ್ಲಿ ರಕ್ತಸ್ರಾವ ಹೆಚ್ಚುತ್ತಿತ್ತು. ಹೃದಯ ಬಡಿತ ಇಳಿಕೆಯಾಗಿತ್ತು. ಅಗತ್ಯ ಚಿಕಿತ್ಸೆ ಕ್ರಮ ಕೈಗೊಂಡು, 20 ಬಾಟಲಿ ರಕ್ತ ನೀಡಿದೆವು. ಪ್ರಾಣ ಉಳಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಹೇಳಿದರು. ರಕ್ತ, ಔಷಧಿ ಸೇರಿದಂತೆ ಆಸ್ಪತ್ರೆ ಬಿಲ್ಲು ಲಕ್ಷಕ್ಕೂ ಅಧಿಕ ವೆಚ್ಚವಾಗಿದೆ, ಆಸ್ಪತ್ರೆ ಬಿಲ್ನಲ್ಲಿ ರಿಯಾಯಿತಿ ನೀಡಿದ್ದಾರೆ ಎಂದು ಸಹೋದರ ನಾಗರಾಜ್ ತಿಳಿಸಿದ್ದಾರೆ.
ಬೈಕಲ್ಲಿ ಬಿಟ್ಟು ಬಂದಿದ್ದ ಚಂದ್ರಶೇಖರ: ಚಂದ್ರಶೇಖರ್ ಸದಾ ಅಣ್ಣನ ಚಿಂತೆಯಲ್ಲಿದ್ದು, ನಾಪತ್ತೆ ಬಳಿಕ ತೀವ್ರ ಖಿನ್ನತೆ ಒಳಗಾಗಿದ್ದರು. ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಮಲ್ಪೆ ಮೀನುಗಾರಿಕೆ ಹೋಗುವಾಗ ನಾನೇ ಭಟ್ಕಳಕ್ಕೆ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿ ಬಿಟ್ಟು ಬಂದಿದ್ದೆ ಎಂಬ ವಿಚಾರವನ್ನು ಆಗಾಗ ಹೇಳುತ್ತ ಬಿಕ್ಕಿಬಿಕ್ಕಿ ಅಳುತ್ತಿದ್ದರು ಎಂದು ಸಂಬಂಧಿಕರು ಹೇಳುತ್ತಾರೆ.
ಸ್ವಲ್ಪಸ್ವಲ್ಪ ಇಲಿ ಪಾಷಾಣ ಸೇವನೆ: ಒಮ್ಮೆಲೆ ಇಲಿ ಪಾಷಾಣ ತಿಂದಿಲ್ಲ, ಪೇಸ್ಟ್ ಮಾದರಿಯ ವಿಷವನ್ನು ಸ್ವಲ್ಪಸ್ವಲ್ಪ ತಿಂದು ಅನಾರೋಗ್ಯಕ್ಕೀಡಾಗಿದ್ದಾನೆ. ಆಗ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೆವು. ಆದರೆ ನಮಗೆ ವಿಷ ಸೇವನೆ ತಿಳಿದಿರಲಿಲ್ಲ. ದುರ್ವಿಧಿ, ಇನ್ನೊಬ್ಬ ಮನೆ ಮಗನನ್ನೂ ಕಳೆದುಕೊಳ್ಳಬೇಕಾಯಿತು ಎನ್ನುತ್ತಾರೆ ಚಂದ್ರಶೇಖರ್ ಭಾವ ಶ್ರೀಧರ್.
ಎರಡು ಸಾವಿಗೆ ಯಾರು ಹೊಣೆ?: ಸರ್ಕಾರ ಎಲ್ಲ ಹೇಳುತ್ತಿದೆ, ಮಾಡುತ್ತಿದೆ; ಆದರೆ ನಾವು ಏನು ಮಾಡುವುದು? ಒಂದೆ ಮನೆಯಲ್ಲಿ ಎರಡು ಸಾವಿಗೆ ಯಾರು ಹೊಣೆ ಎಂದು ಚಂದ್ರಶೇಖರ್ ಭಾವ ಶ್ರೀಧರ್ ಪ್ರಶ್ನಿಸುತ್ತಾರೆ. ಪರಿಹಾರದ ಹಣ ತಿನ್ನಲು ಆಗುತ್ತದೆಯೇ? ನಮ್ಮವರು ಮರಳಿ ಬರುವರೇ ಎಂದು ಗದ್ಗದಿತರಾಗಿ ಪ್ರಶ್ನಿಸಿದರು. ಮನೆಯ ಪರಿಸ್ಥಿತಿ ಹೇಳುವಂತಿಲ್ಲ. ಯಾರೂ ಸರಿಯಾಗಿ ಊಟ, ತಿಂಡಿ ಮಾಡುತ್ತಿಲ್ಲ. ನಮ್ಮ ಕುಟುಂಬದ ಪರಿಸ್ಥಿತಿ ಹೀಗಾದರೆ ಉಳಿದ ಆರು ಕುಟುಂಬಗಳ ಪರಿಸ್ಥಿತಿ ಏನು ಎಂದು ದುಃಖ ವ್ಯಕ್ತಪಡಿಸಿದರು ಶ್ರೀಧರ್.
ಮೀನುಗಾರಿಕೆ ವೃತ್ತಿ: ಮೃತ ಚಂದ್ರಶೇಖರ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ಸದಾ ಲವಲವಿಕೆಯಿಂದಿರುತ್ತಿದ್ದರು. ಮಲ್ಪೆ ಬಂದರಿಗೂ ಮೀನುಗಾರಿಕೆಗೆ ಬರುತ್ತಿದ್ದರು. ಊರಿನಲ್ಲಿ ದೋಣಿ ಮೂಲಕ ನಾಡದೋಣಿ ಮೀನುಗಾರಿಕೆ ಮಾಡಿಕೊಂಡು ಬರುವ ಸಣ್ಣ ಆದಾಯದಲ್ಲಿ ಮನೆಗೂ ಖರ್ಚಿಗೆ ನೀಡುತ್ತಿದ್ದರು.
ಬಡ ಕುಟುಂಬಕ್ಕೆ ಬರಸಿಡಿಲು: ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬ ಇನ್ನೊಬ್ಬ ಮಗನನ್ನು ಕಳೆದುಕೊಂಡು ಜರ್ಜರಿತವಾಗಿದೆ. ರಮೇಶ್, ಚಂದ್ರಶೇಖರ್ ಸೇರಿದಂತೆ ಮೂವರು ಗಂಡು, ಇಬ್ಬರು ಹೆಣ್ಣುಮಕ್ಕಳು. ಇಬ್ಬರು ಹೆಣ್ಣುಮಕ್ಕಳಿಗೆ, ಹಿರಿಯ ಸಹೋದರನಿಗೆ ವಿವಾಹವಾಗಿದೆ. ನಾಪತ್ತೆಯಾಗಿರುವ ರಮೇಶ್ ಬಡ ಕುಟುಂಬಕ್ಕೆ ಮುಖ್ಯ ಆಧಾರಸ್ತಂಭವಾಗಿದ್ದರು. ನಾಪತ್ತೆ ಘಟನೆ ಬಳಿಕ ತಾಯಿ ಹಾಸಿಗೆ ಹಿಡಿದಿದ್ದು, ತಂದೆಯು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.