ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಆರೋಪಿ ಗಳನ್ನು ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.
ಪುಲಕೇಶಿನಗರದ ಮೊಹಮ್ಮದ್ ರಿಜ್ವಾನ್ (29) ಮತ್ತು ಪರ್ವೆಜ್ ಅಹಮದ್ (27) ಗುಂಡೇಟು ತಿಂದು ಸೆರೆಸಿಕ್ಕ ಆರೋಪಿಗಳು. ಜ.16ರಂದು ಅಬೂ ಸೂಫಿಯಾನ್ (27) ಎಂಬಾತನ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಈ ಬಗ್ಗೆ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿ ಮೊಹಮ್ಮದ್ ತಂಜೀಲ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಶಿವಾಜಿನಗರದ ಅಬ್ದುಲ್ ಮತೀನ್ ಎಂಬಾತನನ್ನು ಬಂಡಿಮಠದ ಬಳಿಯಿಂದ ಸ್ಯಾಂಟ್ರೋ ಕಾರಿನಲ್ಲಿ ಅಪಹರಿಸಿ ಬಾಗಲೂರು-ಹೆಣ್ಣೂರು ಮುಖ್ಯರಸ್ತೆಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದ.
ಶಿವಾಜಿನಗರ, ಭಾರತಿನಗರ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ, ರಿಜ್ವಾನ್ ಮತ್ತು ಪರ್ವೆಜ್ ನೋಂದಣಿ ಫಲಕವಿಲ್ಲದ ದ್ವಿಚಕ್ರ ವಾಹನದಲ್ಲಿ ಕಲ್ಪಳ್ಳಿ ಸ್ಮಶಾನ ರಸ್ತೆಯಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಭಾರತೀನಗರ ಇನ್ಸ್ಪೆಕ್ಟರ್ ರಮೇಶ್ ತಮ್ಮ ಸಿಬ್ಬಂದಿ ಜತೆಗೆ ತೆರಳಿ ಬಂಧನಕ್ಕೆ ಮುಂದಾಗಿದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಶರಣಾಗುವಂತೆ ಆರೋಪಿಗಳಿಗೆ ರಮೇಶ್ ಎಚ್ಚರಿಕೆ ನೀಡಿ ಗಾಳಿಯಲ್ಲಿ 1 ಗುಂಡು ಹಾರಿಸಿದ್ದರು. ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಮುಂದಾದಾಗ ಆರೋಪಿಗಳ ಕಾಲಿಗೆ ಇನ್ಸ್ಪೆಕ್ಟರ್ ಗುಂಡಿಕ್ಕಿದ್ದಾರೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಎಸ್. ಡಿ. ಶರಣಪ್ಪ ತಿಳಿಸಿದ್ದಾರೆ.
ಅಕ್ರಮ ಸಂಬಂಧಕ್ಕೆ ಹತ್ಯೆ
ಅತ್ತಿಗೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ಅಬ್ದುಲ್ ಮತೀನ್ನನ್ನು ಕೊಲೆ ಮಾಡಿದ್ದಾಗಿ ಆರೋಪಿ ಮೊಹಮ್ಮದ್ ರಿಜ್ವಾನ್ ಬಾಯ್ಬಿಟ್ಟಿದ್ದಾನೆ. ಅಬ್ದುಲ್ ಮತೀನ್ಗೆ ತನ್ನ ತಂಗಿಯನ್ನು ಮದುವೆ ಮಾಡಿಸಿದ ಕೋಪಕ್ಕೆ ಅಬೂ ಸೂಫಿಯನ್ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಈ ಎರಡು ಪ್ರಕರಣದಲ್ಲಿ ಗುಂಡೇಟಿನಿಂದ ಗಾಯಗೊಂಡಿರುವ ಮೊಹಮದ್ ರಿಜ್ವಾನ್, ಪರ್ವೆಜ್ ಸೇರಿ ಮೊಹಮ್ಮದ್ ತಂಜಿಜ್, ಮೊಹಮದ್ ಸಫಾನ್, ಸಯ್ಯದ್ ಅಲಿ, ಯಾಸಿನ್ ಖಾನ್ ಮತ್ತು ಶಾಹಿದ್ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದಾರೆ.