More

    ಬಿಜೆಪಿ ಮುಖಂಡ ಕಪಿಲ್​ ಮಿಶ್ರಾ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಚುನಾವಣಾ ಆಯೋಗ ಸೂಚನೆ

    ನವದೆಹಲಿ: ಬಿಜೆಪಿ ನಾಯಕ ಕಪಿಲ್​ ಮಿಶ್ರಾ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಚುನಾವಣಾ ಆಯೋಗ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.

    ಕಪಿಲ್​ ಮಿಶ್ರಾ ಅವರು ಕೋಮು ಭಾವನೆ ಕೆರಳಿಸುವಂತೆ ಟ್ವೀಟ್​ ಮಾಡಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳುವಂತೆ ಹೇಳಿದೆ.

    ದೆಹಲಿ ಚುನಾವಣೆ ಫೆ.8ರಂದು ನಡೆಯಲಿದೆ. ಹಾಗೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯೂ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಕಪಿಲ್​ ಮಿಶ್ರಾ ಗುರುವಾರ ವಿವಾದಾತ್ಮಕ ಟ್ವೀಟ್​ವೊಂದನ್ನು ಮಾಡಿ ವಿವಾದ ಸೃಷ್ಟಿಸಿದ್ದರು.

    ದೆಹಲಿಯ ಸಾಹೀನ್​ಬಾಗ್​ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದ ಕಪಿಲ್​ ಮಿಶ್ರಾ, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳಲ್ಲಿ ಸಾಹೀನ್​ ಬಾಗ್​ ಪ್ರಮುಖ ತಾಣವಾಗಿದೆ. ಈ ಸಾಹೀನ್ ಬಾಗ್​ ಮೂಲಕ ಪಾಕಿಸ್ತಾನ ಪ್ರವೇಶ ಮಾಡುತ್ತಿದೆ. ದೆಹಲಿಯಲ್ಲಿ ಒಂದು ಮಿನಿ ಪಾಕಿಸ್ತಾನವೇ ಸೃಷ್ಟಿಯಾಗುತ್ತಿದೆ. ಸಾಹೀನ್​ಬಾಗ್​, ಚಾಂದ್​ ಬಾಗ್​ ಮತ್ತಿತರ ಪ್ರದೇಶಗಳಲ್ಲಿ ಕಾನೂನು ಪಾಲನೆ ಆಗುತ್ತಿಲ್ಲ. ಪಾಕಿಸ್ತಾನಿ ಹೋರಾಟಗಾರರು ರಸ್ತೆಗಳನ್ನೆಲ್ಲ ಅತಿಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದರು.

    ಹಾಗೇ ಇನ್ನೊಂದು ಪೋಸ್ಟ್​ನಲ್ಲಿ ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನ ಸಂಘರ್ಷಕ್ಕೆ ಹೋಲಿಸಿದ್ದರು.

    ಕಪಿಲ್​ ಮಿಶ್ರಾ ಅವರಿಗೆ ನೋಟಿಸ್​ ನೀಡಿದ್ದ ಚುನಾವಣಾ ಆಯೋಗ ಮೂರು ದಿನಗಳಲ್ಲಿ ಉತ್ತರಿಸುವಂತೆ ಕಾಲಾವಧಿ ನೀಡಿತ್ತು. ಆದರೆ ನಾನು ತಪ್ಪು ಮಾತನಾಡಿದ್ದೇನೆ ಎಂದು ನನಗೆ ಅನ್ನಿಸುತ್ತಿಲ್ಲ. ಸತ್ಯ ಹೇಳುವುದು ಈ ದೇಶದಲ್ಲಿ ಅಪರಾಧವಲ್ಲ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿದ್ದರು.

    ಬಳಿಕ ಚುನಾವಣಾ ಆಯೋಗ, ಕಪಿಲ್​ ಮಿಶ್ರಾ ಅವರ ಟ್ವೀಟ್​ ತೆಗೆದುಹಾಕುವಂತೆ ಟ್ವಿಟರ್​ಗೇ ಸೂಚನೆ ನೀಡಿತ್ತು. ದೆಹಲಿಯ ಪ್ರತಿಭಟನಾ ಸ್ಥಳವನ್ನು ಮಿನಿ ಪಾಕಿಸ್ತಾನ ಎಂದು ಹೇಳಿದ್ದು ಖಂಡನೀಯ. ಇದೊಂದು ಕೋಮು ಸೌಹಾರ್ದತೆ ಕದಡುವ ಟ್ವೀಟ್ ಎಂದು ಹೇಳಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts