ಶಿವಮೊಗ್ಗ: ಹಬ್ಬದಾಚರಣೆ, ಸಂಪ್ರದಾಯಗಳ ಪಾಲನೆಯಿಂದ ಶಾಂತಿ, ನೆಮ್ಮದಿ ಲಭಿಸುಸುತ್ತದೆ. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದಿಂದ ಚೌಕಿಮಠದ ಆವರಣದಲ್ಲಿ ದಸರಾ ಮಹೋತ್ಸವ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ನವರಾತ್ರಿ, ಆಯುಧಪೂಜೆ ಆಚರಣೆ ನಮ್ಮಲ್ಲಿರುವ ಶ್ರದ್ಧೆ, ಭಕ್ತಿಯ ಸಂಕೇತ. ಮನುಷ್ಯನಿಗೆ ಹಣವೇ ಮುಖ್ಯವಲ್ಲ. ಸೇವೆ, ಸತ್ಕಾರ್ಯದ ಜತೆಗೆ ಇಂತಹ ಪೂಜೆ ಪುನಸ್ಕಾರಗಳು ಮನುಷ್ಯನ ಜೀವನವನ್ನು ಹಸನುಗೊಳಿಸುತ್ತವೆ ಎಂದು ತಿಳಿಸಿದರು.
ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಪ್ರತಿಷ್ಠಿತ ಸಂಸ್ಥೆ. ಹಲವಾರು ಧಾರ್ಮಿಕ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಧಾರ್ಮಿಕ ಆಚರಣೆಗಳ ಮಹತ್ವ ತಿಳಿಸಬೇಕು. ಭಗವಂತನ ಅನುಗ್ರಹದಿಂದ ಎಲ್ಲರೂ ಸುಖ ಸಮೃದ್ಧಿಯಿಂದ ಬದುಕು ನಡೆಸುವಂತಾಗಲಿ ಎಂದು ಆಶಿಸಿದರು.
ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಕಾರ್ಯದರ್ಶಿ ಎಸ್.ಪಿ.ದಿನೇಶ್, ಕೋಶಾಧ್ಯಕ್ಷ ಕೆ.ಎಸ್.ತಾರನಾಥ್, ನಿರ್ದೇಶಕರಾದ ಅನಿತಾ ರವಿಶಂಕರ್, ಡಾ. ಸಿ.ರೇಣುಕಾರಾಧ್ಯ, ಎಸ್.ಎನ್.ಮಹಾಲಿಂಗಯ್ಯಶಾಸ್ತ್ರಿ, ಮೋಹನ್ಕುಮಾರ್, ಟಿ.ಬಿ.ಜಗದೀಶ್, ಎಂ.ಆರ್.ಪ್ರಕಾಶ್, ಸಿ.ಮಹೇಶಮೂರ್ತಿ, ಜೆ.ಆರ್.ರತ್ನಾ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಇದ್ದರು.