ನಂದೇಶ್ವರ: ಅನ್ನ ನೀಡುವ ರೈತರು ಸರ್ಕಾರದ ಮುಂದೆ ಕೈ ಒಡ್ಡುವಂತೆ ಆಗಬಾರದು. ಸೌಲಭ್ಯ ಒದಗಿಸಿದರೆ ರೈತರೇ ಸರ್ಕಾರಕ್ಕೆ ಸಾಲ ಕೊಡುವ ದಿನಗಳು ಬರುತ್ತವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮತ್ಯುಂಜಯ ಸ್ವಾಮೀಜಿ ಹೇಳಿದರು.
ಸಮೀಪದ ಸವದಿ ಗ್ರಾಮದ ಶ್ರೀ ಸಂಗನಬಸವ ಶಿವಯೋಗಿಗಳ 83ನೇ ಹಾಗೂ ಡಾ. ಮಹಾಂತ ಶಿಯೋಗಿಗಳ 7ನೇ ವರ್ಷದ ಸ್ಮರಣೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮಹೋತ್ಸವದ ಕಷಿಗೋಷ್ಠಿ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವಂತಹ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು.
ಜನಪದ ಕಲಾವಿದ ಸಿದ್ದಪ್ಪ ಬಿದರಿ ಮಾತನಾಡಿ, ಯುವ ರೈತರಿಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಡಿಗಣಿಯ ಅನ್ನದಾನೇಶ್ವರ ಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು. ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯ, ಸವದಿ ಇಳಕಲ್ ಮಠದ ಗುರು ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಕಡೂರದ ಡಾ. ಜಿ.ವಿ. ಮಂಜುನಾಥ, ಸಂಗಮೇಶ ಪಾಟೀಲ, ಅಪ್ಪಣ್ಣ ಪ್ರಥಮಶೆಟ್ಟಿ, ಶಿವಾನಂದ ಪಾಟೀಲ ಇತರರಿದ್ದರು.