More

    ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತು ಬೀಗ

    ಗುತ್ತಲ: ಅಧಿಕಾರಿಗಳ ಎಡವಟ್ಟಿನಿಂದ ರೈತರು ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ. ‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬಂಥ ಸ್ಥಿತಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿದೆ.

    ರೈತರು ರಿಯಾಯಿತಿ ದರದಲ್ಲಿ ತಾಡಪತ್ರಿಗಳನ್ನು ಪಡೆಯಲು ಶಾಸಕರು, ಜಿ.ಪಂ. ಹಾಗೂ ತಾ.ಪಂ. ಸದಸ್ಯರಿಂದ ಅನುಮತಿ ಚೀಟಿ ತರಬೇಕೆಂದು ಕೇಂದ್ರದ ಅಧಿಕಾರಿಗಳು ಹೇಳುತ್ತಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೆಯೇ ಅಧಿಕಾರಿಗಳ ಮಾತು ಕೇಳಿ ಜನಪ್ರತಿನಿಧಿಗಳಿಂದ ಚೀಟಿ ಪಡೆದುಕೊಂಡು ಬಂದ ಹಲವರು ತಾಡಪತ್ರಿಗಳಿಗೆ ಮುಗಿಬಿದ್ದಿದ್ದಾರೆ. ಇವರೆಲ್ಲರಿಗೂ ಉತ್ತರಿಸಲಾಗದೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರದ ಕಡೆ ಮುಖ ಮಾಡಿಲ್ಲ. ಹೀಗಾಗಿ, ಕೇಂದ್ರದ ಬಾಗಿಲಿಗೆ ಎರಡು ಬೀಗ ಬಿದ್ದಿವೆ.

    ನಡೆದಿದ್ದೇನು?: ಮಳೆಯಿಂದ ಬೆಳೆಗಳನ್ನು ರಕ್ಷಣೆ ಮಾಡಲು, ಬೆಳೆದ ಬೆಳೆಗಳನ್ನು ಹಸನು ಮಾಡಿ ರಾಶಿ ಮಾಡಲು ಹಾಗೂ ರಾಶಿಗಳನ್ನು ಮುಚ್ಚಲು ಅನುಕೂಲ ಆಗಲೆಂದು ಸರ್ಕಾರ 1000 ರೂ. ರಿಯಾಯಿತಿ ದರದಲ್ಲಿ ರೈತರಿಗೆ ತಾಡಪತ್ರಿಗಳನ್ನು ನೀಡುತ್ತದೆ. ಪ್ರಸಕ್ತ ಸಾಲಿನಲ್ಲಿ 250 ಜಿಎಸ್​ಎಂ ದಪ್ಪದ 18 ಅಡಿ ಅಗಲ ಹಾಗೂ 24 ಅಡಿ ಉದ್ದ ಅಳತೆಯ 300 ಪ್ಲಾಸ್ಟಿಕ್ ತಾಡಪತ್ರಿಗಳು ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಬಂದಿವೆ. ಆದರೆ, ‘ತಾಡಪತ್ರಿಗಳನ್ನು ಪಡೆಯಲು ಜನಪ್ರತಿನಿಧಿಗಳಿಂದ ಅನುಮತಿ ಚೀಟಿ ತರಬೇಕು’ ಎಂಬ ಸ್ವಘೊಷಿತ ನಿಯಮವನ್ನು ಕೇಂದ್ರದ ಅಧಿಕಾರಿಗಳು ಹೊರತಂದಿದ್ದು, ಮಂಗಳವಾರ ತಾಡಪತ್ರಿ ತರಲು ಬಂದಿದ್ದ ರೈತರನ್ನು ಕಂಗೆಡಿಸಿತು.

    ಇಷ್ಟು ವರ್ಷ ಇಲ್ಲದ ಪದ್ಧತಿ ಈ ಬಾರಿ ಏಕೆ? ಈ ರೀತಿ ಜನಪ್ರತಿನಿಧಿಗಳಿಂದ ಅನುಮತಿ ಚೀಟಿ ತರಬೇಕೆಂಬುದು ಸರ್ಕಾರದ ಆದೇಶದಲ್ಲಿರದಿದ್ದರೂ ಅಧಿಕಾರಿಗಳು ಹೀಗೆ ಹೇಳುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಸ್ಥಳದಲ್ಲಿದ್ದ ಹಲವು ರೈತರು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ‘ತಮಗೆ ಬೇಕಾದವರಿಗೆ ಮಾತ್ರ ತಾಡಪತ್ರಿ ಹಂಚಲು ಮಾಡಿಕೊಂಡ ಕಾನೂನು ಬಾಹಿರ ನಿಯಮವಿದು’ ಎಂದು ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.

    ಇದರಿಂದ ಬೆಚ್ಚಿಬಿದ್ದ ಅಧಿಕಾರಿಗಳು ವರಸೆ ಬದಲಾಯಿಸಿ, ಜನಪ್ರತಿನಿಧಿಗಳಿಂದ ಚೀಟಿ ತರದ ಕೆಲವರಿಗೂ ತಾಡಪತ್ರಿಗಳನ್ನು ವಿತರಿಸಿದರು. ಅಧಿಕಾರಿಗಳ ಯಡವಟ್ಟಿನಿಂದ ಹಾಗೂ ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಗೊಂದಲಕ್ಕೀಡಾದ ರೈತರು ಸಂಜೆವರೆಗೆ ಪರಸ್ಪರ ಅಂತರ ಮರೆತು ಮುಗಿಬಿದ್ದು ತಾಡಪತ್ರಿಗಳನ್ನು ಕೊಂಡರು.

    ಬುಧವಾರ ಸುಳಿಯದ ಅಧಿಕಾರಿಗಳು: ಗುತ್ತಲ ಹಾಗೂ 31 ಹಳ್ಳಿಗಳ ರೈತರಿಗೆ ನೀಡಲು ಕೇವಲ 300 ತಾಡಪತ್ರಿಗಳು ಬಂದಿವೆ. ಅದರಲ್ಲೂ ಹೊಸ ‘ಟೀಟಿ ನಿಯಮ’ದಿಂದ ಎಷ್ಟೋ ರೈತರು ನ್ಯಾಯಯುತವಾಗಿ ತಾಡಪತ್ರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಬುಧವಾರ ಬೆಳಗ್ಗೆ ತಾಡಪತ್ರಿಗಳನ್ನು ಪಡೆದುಕೊಳ್ಳಲು ನೂರಾರು ರೈತರು ಆಗಮಿಸಿದ್ದರು. ಆದರೆ, ರೈತರ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದು ಎಂಬ ಆತಂಕದಲ್ಲಿ ಅಧಿಕಾರಿಗಳು ಅತ್ತ ಸುಳಿಯಲಿಲ್ಲ. ಬೀಗ ಹಾಕಲಾಗಿದ್ದ ಕೇಂದ್ರದ ಎದುರು ನೂರಾರು ರೈತರು ಕಾಯುತ್ತ ಕುಳಿತಕೊಂಡರು. ಕೊನೆಗೆ ಕಾದು ಕಾದು ಸುಸ್ತಾದ ರೈತರು ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿ ಕೇಂದ್ರಕ್ಕೆ ಮತ್ತೊಂದು ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

    ನಾಳೆಯಾದರೂ ಅಧಿಕಾರಿಗಳು ಬರಲೇಬೇಕಲ್ಲ. ಬಂದಾಗ ಸರಿಯಾಗಿ ವಿಚಾರಿಸಿಕೊಳ್ಳೋಣ ಎಂದು ರೈತರು ಮನೆಯತ್ತ ಮುಖಮಾಡಿದರು.

    ಉಳಿದ ಸೌಲಭ್ಯಕ್ಕೂ ಕಂಟಕ: ಮೆಕ್ಕೆಜೋಳ ಬೆಳೆಗೆ 5 ಸಾವಿರ ರೂ. ಸಹಾಯ ಧನ ಪಡೆಯಲು ಫಲಾನುವಿಗಳು ರೈತ ಸಂಪರ್ಕ ಕೇಂದ್ರದಲ್ಲಿ ನಿಗದಿತ ದಾಖಲೆಗಳನ್ನು ಸಲ್ಲಿಸಬೇಕೆಂದು ನೋಟಿಸ್ ಅಂಟಿಸಿದ್ದರಿಂದ ನೂರಾರು ರೈತರು ದಾಖಲೆಗಳನ್ನು ನೀಡಲು ಬಂದು ಅಧಿಕಾರಿಗಳು ಇಲ್ಲದ ಕಾರಣ ನಿರಾಸೆಯಿಂದ ಮರಳಿದರು. ಇನ್ನು ಬೀಜ- ಗೊಬ್ಬರಕ್ಕೂ ರೈತರು ಪರದಾಡಿದರು.

    ಅಧಿಕಾರಿ- ಜನಪ್ರತಿನಿಧಿಗಳ ಯಡವಟ್ಟಿನಿಂದ ಅನ್ನದಾತರು ತೊಂದರೆ ಅನುಭವಿಸುವಂತಾಗಿದೆ. ಕೂಡಲೆ ಗೊಂದಲ ನಿವಾರಿಸಿ ರೈತರಿಗೆ ಸೌಲಭ್ಯ ಒದಗಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

    ರೈತರು ಜನಪ್ರತಿನಿಧಿಗಳಿಂದ ಚೀಟಿ ತಂದು ತಾಡಪತ್ರಿಗಳನ್ನು ಪಡೆದುಕೊಳ್ಳಬೇಕೆಂದು ಯಾವುದೇ ನಿಯಮವಿಲ್ಲ. ಈ ರೀತಿ ಏತಕ್ಕಾಗಿ ಮಾಡಿದ್ದಾರೆಂಬುದು ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುವೆ.

    | ಜಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ, ಹಾವೇರಿ

    ಜನ ಪ್ರತಿನಿಧಿಗಳನ್ನು ಬಿಟ್ಟು ಏನೂ ಮಾಡಲು ಬರಲ್ಲ. ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡು ರೈತರಿಗೆ ವಿತರಣೆ ಮಾಡುತ್ತಿದ್ದೇವೆ. ಈ ಬಗ್ಗೆ ಜಂಟಿ ಕೃಷಿ ನಿರ್ದೇಶಕರನ್ನು ಭೇಟಿಯಾಗಿ ವಿಷಯ ತಿಳಿಸಿರುವೆ. ಮತ್ತೆ ತಾಡಪತ್ರಿಗಳು ಬಂದ ಮೇಲೆ ವಿತರಣೆ ಪ್ರಾರಂಭಿಸಲಾಗುವುದು.

    | ಪುಟ್ಟರಾಜ ಹಾವನೂರ

    ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಗುತ್ತಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts